ನವದೆಹಲಿ: ಡೊಮಿನಿಕಾ ಹೈಕೋರ್ಟ್ನಿಂದ ಜಾಮೀನು ಪಡೆದು ಆಂಟಿಗುವಾ ಮತ್ತು ಬಾರ್ಬುಡಗೆ ಮರಳಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ, ಭಾರತೀಯ ತನಿಖಾ ಸಂಸ್ಥೆಗಳ ಮೇಲೆ 'ಅಪಹರಣ ಯತ್ನ'ದ ಆರೋಪ ಮಾಡಿದ್ದಾರೆ.
ಭಾರತದಲ್ಲಿ ₹13,500 ಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧನಿದ್ದೆ ಎಂದಿರುವ ಚೋಕ್ಸಿ, ಆಂಟಿಗುವಾದಲ್ಲೇ ವಿಚಾರಣೆ ನಡೆಸುವಂತೆ ಕೋರಿದ್ದೆ. ಆದರೆ, ನನ್ನ ಅಪಹರಣದ ಬಳಿಕ ನನಗೆ ಕೊಟ್ಟಿರುವ ಹಿಂಸೆಯಿಂದ ನಾನು ದೈಹಿಕ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳುವುದು ಅನುಮಾನವಾಗಿದೆ. ಭಾರತೀಯ ತನಿಖಾ ಸಂಸ್ಥೆಗಳು ನನ್ನನ್ನು ಮತ್ತೆ ಅಪಹರಿಸುವ ಯತ್ನ ನಡೆಸುತ್ತವೆ ಎಂಬ ಭಯ ಕಾಡುತ್ತಿದೆ ಎಂದಿದ್ದಾರೆ.
'ನಾನು ಮನೆಗೆ ಹಿಂತಿರುಗಿದ್ದೇನೆ. ಆದರೆ ಈ ಹಿಂಸೆಯು ನನ್ನ ಮಾನಸಿಕ ಸ್ಥಿತಿಯ ಮೇಲೆ ಅಗಾಧ ಪರಿಣಾಮ ಬೀರಿದೆ. ಶಾಶ್ವತ ಭಯವನ್ನು ಹುಟ್ಟು ಹಾಕಿದೆ. ನನ್ನೆಲ್ಲ ವ್ಯವಹಾರಗಳನ್ನು ಮುಚ್ಚಿಹಾಕಿದ ನಂತರ ಹಾಗೂ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಬಳಿಕ ನನ್ನನ್ನು ಅಪಹರಿಸುವ ಯತ್ನವನ್ನು ಭಾರತೀಯ ಅಧಿಕಾರಿಗಳು ಮಾಡುತ್ತಾರೆ ಎಂದುಕೊಂಡಿರಲಿಲ್ಲ' ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
'ನಾನು ಭಾರತಕ್ಕೆ ವಾಪಸ್ ಆಗಿ ನಿರ್ದೋಷಿಯೆಂದು ಸಾಬೀತು ಪಡಿಸಬೇಕೆಂದಿದ್ದೆ. ನನ್ನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಕಳೆದ 50 ದಿನಗಳಲ್ಲಿ ನನ್ನನ್ನು ಅಪಹರಿಸಲು ನಡೆಸಿದ ಪ್ರಯತ್ನ ಕೆಟ್ಟದಾಗಿ ಪರಿಣಮಿಸಿದೆ. ಭಾರತದಲ್ಲಿ ನನ್ನ ಸುರಕ್ಷತೆ ಬಗ್ಗೆ ಕಳವಳಗೊಂಡಿದ್ದೇನೆ. ನನ್ನ ಮಾನಸಿಕ ಆರೋಗ್ಯ ಸುಧಾರಿಸುತ್ತದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ' ಎಂದು ಮೆಹುಲ್ ಚೋಕ್ಸಿ ಹೇಳಿದ್ದಾರೆ ಎನ್ನಲಾಗಿದೆ.
I'm back home but this torture has left permanent scars on my psychology & physically rather than permanent scars on my soul. I couldn’t imagine after closing all my business&seizing all my properties, kidnapping attempt would be made on me by Indian Agencies:Mehul Choksi to ANI pic.twitter.com/sEtACfRCfQ
— ANI (@ANI) July 15, 2021
Many times, I told agencies to visit here (Antigua) to interrogate me as due to health issues I was not able to travel anymore. I was always available for co-operation with the agency but this inhuman kidnapping was never expected by me: Fugitive diamantaire Mehul Choksi to ANI
— ANI (@ANI) July 15, 2021
ಅಕ್ರಮ ಪ್ರವೇಶದ ಕಾರಣಕ್ಕೆ ಡೊಮಿನಿಕಾದಲ್ಲಿ 51 ದಿನಗಳ ಕಾಲ ಬಂಧನದಲ್ಲಿದ್ದ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಅಲ್ಲಿನ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರು ಮಾಡಿತ್ತು.
ಜಾಮೀನಿಗಾಗಿ 10 ಸಾವಿರ ಡಾಲರ್ (₹7.45 ಲಕ್ಷ) ಅನ್ನು ಠೇವಣಿಯಾಗಿ ಇಟ್ಟ ಚೋಕ್ಸಿ ಚಾರ್ಟರ್ಡ್ ವಿಮಾನದಲ್ಲಿ ಆಂಟಿಗುವಾಕ್ಕೆ ಹಿಂತಿರುಗಿದ್ದಾರೆ ಎಂದು ಆಂಟಿಗುವಾ ಮಾಧ್ಯಮಗಳು ವರದಿ ಮಾಡಿವೆ.
ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಚೋಕ್ಸಿ ಅವರ ಸಿಟಿ ಸ್ಕ್ಯಾನ್ ಸೇರಿದಂತೆ ಇತರ ವೈದ್ಯಕೀಯ ವರದಿಗಳನ್ನು ಅವರ ಪರ ವಕೀಲರು ಲಗತ್ತಿಸಿದ್ದರು. ಅವರಿಗೆ ನರವಿಜ್ಞಾನಿಗಳು ಮತ್ತು ನರಶಸ್ತ್ರಚಿಕಿತ್ಸಕರ ಸಲಹೆ ಮತ್ತು ತುರ್ತು ಚಿಕಿತ್ಸೆ ಅಗತ್ಯವಿದೆಯೆಂದು ಅಲ್ಲಿನ ವೈದ್ಯರು ಶಿಫಾರಸು ಮಾಡಿದ್ದರು. ಈ ಸೇವೆಗಳು ಡೊಮಿನಿಕಾ ದ್ವೀಪದಲ್ಲಿ ಲಭ್ಯವಿಲ್ಲ ಎಂದೂ ತಿಳಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಚೋಕ್ಸಿ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಭಾರತದಲ್ಲಿ ₹ 13,500 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೋಕ್ಸಿ, ಮೇ 23ರಂದು ಆಂಟಿಗುವಾ ಮತ್ತು ಬಾರ್ಬುಡಾದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಬಳಿಕ ಅವರು ನೆರೆಯ ಡೊಮಿನಿಕಾ ದ್ವೀಪ ರಾಷ್ಟ್ರದಲ್ಲಿ ಅಕ್ರಮ ಪ್ರವೇಶಕ್ಕಾಗಿ ಬಂಧನಕ್ಕೆ ಒಳಗಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.