ಕಠ್ಮಂಡು: ನೇಪಾಳ ಸಂಸತ್ನ ವಿಸರ್ಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠದ ರಚನೆ ಪ್ರಶ್ನಿಸಿ, ಹೆಚ್ಚಿನ ವಾದ ಮಂಡನೆಗೆ ಅವಕಾಶ ನೀಡುವುದಿಲ್ಲ ಪೀಠವು ಎಂದು ಹೇಳಿದೆ.
ಅರ್ಜಿದಾರರು ಪ್ರಸ್ತಾಪಿಸಿರುವ ವಿಷಯಗಳು ಸಾರ್ವಜನಿಕ ಹಿತದೃಷ್ಟಿಯಿಂದ ಗಂಭೀರ ಸ್ವರೂಪದ್ದಾಗಿವೆ. ಹೀಗಾಗಿ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದೇ ಆದ್ಯತೆಯಾಗಿದೆ ಎಂದೂ ಪೀಠ ಅಭಿಪ್ರಾಯಪಟ್ಟಿದೆ.
ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಶಿಫಾರಸಿನಂತೆ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಮೇ 22ರಂದು ಸಂಸತ್ಅನ್ನು ಎರಡನೇ ಬಾರಿ ವಿಸರ್ಜಿಸಿದರು. ನವೆಂಬರ್ 12 ಹಾಗೂ 19ರಂದು ಎರಡು ಹಂತಗಳಲ್ಲಿ ಚುನಾವಣೆ ಘೋಷಿಸಿದ್ದಾರೆ.
ಸಂಸತ್ನ ವಿಸರ್ಜನೆಯನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ, ಮೇ 28ರಂದು ಮುಖ್ಯನ್ಯಾಯಮೂರ್ತಿ ಚೋಳೇಂದ್ರ ಷಂಶೇರ್ ರಾಣಾ ಅವರು ಅರ್ಜಿಯ ವಿಚಾರಣೆಗಾಗಿ ಸಾಂವಿಧಾನಿಕ ಪೀಠವನ್ನು ರಚಿಸಿದರು.
ನ್ಯಾಯಮೂರ್ತಿಗಳಾದ ತೇಜ್ ಬಹದ್ದೂರ್ ಕೆ.ಸಿ ಹಾಗೂ ವಾಮಕುಮಾರ್ ಶ್ರೇಷ್ಠ ಅವರು ಪೀಠದಲ್ಲಿರುವ ಬಗ್ಗೆ ಆಕ್ಷೇಪ ವ್ಯಕ್ತವಾದ ಕಾರಣ, ವಿಚಾರಣೆಯನ್ನು ಮುಂದೂಡಲಾಗಿತ್ತು.
ನಂತರ, ನ್ಯಾಯಮೂರ್ತಿಗಳ ಹಿರಿತನವನ್ನು ಆಧರಿಸಿ, ಮುಖ್ಯನ್ಯಾಯಮೂರ್ತಿ ರಾಣಾ ಅವರು ಸಾಂವಿಧಾನಿಕ ಪೀಠವನ್ನು ಜೂನ್ 6ರಂದು ಪುನರ್ರಚನೆ ಮಾಡಿದರು. ಪುನರ್ರಚನೆಗೊಂಡ ಪೀಠದ ಬಗ್ಗೆಯೂ ಅಪಸ್ವರ ಕೇಳಿಬಂತು. ಹೀಗಾಗಿ ಪುನಃ ಆಕ್ಷೇಪಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.