ಕಠ್ಮಂಡು: ಹಿಮಾಲಯ ಕಣಿವೆಯನ್ನು ಹಲವಾರು ಪ್ರದೇಶಗಳೊಂದಿಗೆ ಸಂಪರ್ಕಿಸುವ ಹೊಸದಾಗಿ ನಿರ್ಮಿಸಲಾಗಿರುವ 108 ಕಿ.ಮೀ.ಉದ್ದದ ರಸ್ತೆಯನ್ನು ಭಾರತ ಹಾಗೂ ನೇಪಾಳ ಜಂಟಿಯಾಗಿ ಉದ್ಘಾಟಿಸಿವೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಭಾರತ-ನೇಪಾಳ ಗಡಿಯನ್ನು ಸಂಪರ್ಕಿಸುವ ಹೊಸದಾಗಿ ನಿರ್ಮಿಸಲಾದ ರಸ್ತೆಯು ಗಡಿಯುದ್ಧಕ್ಕೂ ದೈನಂದಿನ ಸಂಚಾರವನ್ನು ಸುಗಮಗೊಳಿಸಲಿದೆ.
ಭಾರತದ ಅನುದಾನ ನೆರವಿನೊಂದಿಗೆ ರಸ್ತೆ ನಿರ್ಮಿಸಲಾಗಿದೆ. ಭಾರತದ ಗಡಿ ಲಕ್ಷ್ಮೀಪುರ-ಬಲಾರಾದಿಂದ ನೇಪಾಳ ಸರ್ಲಾಹಿ ಜಿಲ್ಲೆಯ ಗಧೈಯಾವರೆಗಿನ ರಸ್ತೆಯನ್ನು ಡಾಮರೀಕರಣಗೊಳಿಸಲಾಗಿದೆ.
ಭಾರತದ ಕಾನ್ಸುಲೇಟ್ ಜನರಲ್ ನಿತೇಶ್ ಕುಮಾರ್, ಚಂದ್ರನಿಗಪುರ ರಸ್ತೆ ವಿಭಾಗದ ಮುಖ್ಯಸ್ಥ ಬಿನೋದ್ ಹಾಗೂ ಬಿರ್ಗುಂಜ್ ಉಪಸ್ಥಿತರಿದ್ದರು.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮಾಹಿತಿ ಪ್ರಕಾರ ರಸ್ತೆ ನಿರ್ಮಾಣಕ್ಕೆ ಭಾರತವು 4.4 ಕೋಟಿ ರೂ.ಗಳ ಅನುದಾನವನ್ನು ನೀಡಿದೆ. ಭಾರತ ಹಾಗೂ ನೇಪಾಳ ಸರ್ಕಾರಗಳ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾಗಿರುವ ರಸ್ತೆಯು ಇಲ್ಲಿನ ಪ್ರದೇಶದ ಜನರ ಅಭಿವೃದ್ಧಿಗೆ ಪೂರಕವಾಗಲಿದೆ.
ಕಳೆದ ವರ್ಷ ಮೇ 8ರಂದು ಉತ್ತರಾಖಂಡದ ಧಾರ್ಚುಲಾದಲ್ಲಿ ಲಿಪುಲೇಖ್ ಪಾಸ್ ಸಂಪರ್ಕಿಸುವ 80ಕಿ.ಮೀ. ಉದ್ದದ ರಸ್ತೆಯನ್ನು ರಕ್ಷಣಾ ಸಚಿವಾ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು. ಇದಾದ ಬಳಿಕ ಭಾರತ ಹಾಗೂ ನೇಪಾಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಿಗಡಾಯಿಸಿತ್ತು.