ಕಠ್ಮಂಡು: ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರವೂ, ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮನವಿ ಮಾಡುವ ಮೂಲಕ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಈ ಬಗ್ಗೆ ಚುನಾವಣಾ ಆಯೋಗ ಸಹ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
‘ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಕೆಲವರು ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದಾರೆ. ಕೆಲವು ಮಾಧ್ಯಮ ಸಂಸ್ಥೆಗಳೂನೀತಿ ಸಂಹಿತೆ ಉಲ್ಲಂಘಿಸಿವೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಸಿದೆ’ ಎಂದು ‘ಮೈರಿಪಬ್ಲಿಕ್ಡಾಟ್ಕಾಂ’ ವರದಿ ಮಾಡಿದೆ.
ನೇಪಾಳಿ ಕಾಂಗ್ರೆಸ್ ಹಾಗೂ ಸಿಪಿಎನ್ (ಎಂಸಿ) ಪಕ್ಷಗಳು ಕೂಡ ಒಲಿ ಅವರ ನಡೆಯನ್ನು ಖಂಡಿಸಿವೆ. ಒಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗವನ್ನು ಒತ್ತಾಯಿಸಿವೆ.
ಬಾಗಮತಿ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಗುರುವಾರ ಮತದಾನ ನಡೆಯುತ್ತಿದೆ. ಈ ಕ್ಷೇತ್ರದಿಂದ ಗೃಹ ಸಚಿವ ರಾಮ್ ಬಹದ್ದೂರ್ ಥಾಪಾ ಸ್ಪರ್ಧಿಸಿದ್ದಾರೆ. ಸಿಪಿಎನ್ (ಎಂಸಿ) ಪಕ್ಷದ ದೂರಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಥಾಪಾ ಅವರನ್ನು ನ್ಯಾಷನಲ್ ಅಸೆಂಬ್ಲಿಯಿಂದ ಉಚ್ಚಾಟಿಸಲಾಗಿತ್ತು.