ಲಾಹೋರ್: ಪಾಕಿಸ್ತಾನದಲ್ಲಿ ‘ಜಿಹಾದ್’ಗಾಗಿ (ಪವಿತ್ರ ಯುದ್ಧ) ಹಣ ಸಂಗ್ರಹಿಸುವಂತೆ ಜನರನ್ನು ಪ್ರಚೋದಿಸಲು ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಅವಕಾಶ ಇಲ್ಲ. ಅಂಥ ಚಟುವಟಿಕೆಗಳನ್ನು ದೇಶದ್ರೋಹ ಎಂಬುದಾಗಿ ಪರಿಗಣಿಸಲಾಗುವುದು ಎಂದು ಲಾಹೋರ್ ಹೈಕೋರ್ಟ್ ಹೇಳಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿರುವ ಇಬ್ಬರು ಉಗ್ರರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತು.
‘ಯುದ್ಧ ಘೋಷಣೆಯಾದ ಸಂದರ್ಭದಲ್ಲಿ ಅಗತ್ಯ ಎನಿಸಿದರೆ ಮಾತ್ರ ಸರ್ಕಾರವೇ ಹಣವನ್ನು ಸಂಗ್ರಹಿಸಲಿದೆ. ಆದರೆ, ವ್ಯಕ್ತಿ ಅಥವಾ ಸಂಘಟನೆಗಳಿಗೆ ಈ ರೀತಿ ಹಣ ಸಂಗ್ರಹಿಸಲು ಅವಕಾಶ ಇಲ್ಲ’ ಎಂದು ನ್ಯಾಯಮೂರ್ತಿ ಅಲಿ ಬಕಾರ್ ನಜಾಫಿ ನೇತೃತ್ವದ ಪೀಠ ಹೇಳಿತು.
ತೆಹ್ರೀಕ್–ಎ–ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಗೆ ಸೇರಿದ ಉಗ್ರರಾದ ಮುಹಮ್ಮದ್ ಇಬ್ರಾಹಿಂ ಹಾಗೂ ಉಬೇದ್–ಉರ್–ರೆಹಮಾನ್ ಈ ಅರ್ಜಿ ಸಲ್ಲಿಸಿದ್ದರು. ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದಲ್ಲಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.