ಇಸ್ಲಾಮಾಬಾದ್: ಬಂಧನದಲ್ಲಿರುವ ಆರೋಪಿಯನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ನ ಮುಂದೆ ಹಾಜರುಪಡಿಸದಿದ್ದರೆ ಪ್ರಧಾನಿ ಇಮ್ರಾನ್ ಖಾನ್ಗೆ ಸಮನ್ಸ್ ನೀಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಂಗಳವಾರ ಹೇಳಿದೆ.
ಅಫ್ಗನ್ ಗಡಿ ಪ್ರದೇಶದ ಬಳಿ ಸೇನಾ ಶಿಬಿರವೊಂದರ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿರುವ ಅರಿಫ್ ಗುಲ್ ಅವರ ಬಂಧನ ವಿರುದ್ಧದ ಪ್ರಕರಣವನ್ನು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಹ್ಮದ್ ನೇತೃತ್ವದ ತ್ರಿಸದಸ್ಯರ ಪೀಠವೊಂದು ವಿಚಾರಣೆ ನಡೆಸಿತು ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ದಿನಪತ್ರಿಕೆ ವರದಿ ಮಾಡಿದೆ.
ಆರೋಪಿಯನ್ನು ಕರೆತರಲಾಗಿದೆಯೇ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ ‘ಆರೋಪಿ ಅರಿಫ್ ಗುಲ್ ಬಂಧನದಲ್ಲಿದ್ದು,ಅವರನ್ನು ಕರೆತರುವುದು ಕಷ್ಟಕರ’ ಎಂದು ಹೆಚ್ಚುವರಿ ಅಟಾರ್ನಿ ಜನರಲ್ ಉತ್ತರಿಸಿದರು. ಇದನ್ನು ಒಪ್ಪದ ಮುಖ್ಯ ನ್ಯಾಯಮೂರ್ತಿ ಅವರು ವಿಚಾರಣೆಯನ್ನು ಮುಂದೂಡಿದರು.