ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರದ ಜೈಲಿನಲ್ಲಿದ್ದ ತನ್ನ ಪ್ರಜೆ ಮೃತಪಟ್ಟಿರುವುದಕ್ಕೆ ಪಾಕಿಸ್ತಾನವು ಭಾರತದ ವಿರುದ್ಧ ಪ್ರತಿಭಟನೆ ದಾಖಲಿಸಿದೆ. ಇದನ್ನುನಕಲಿ ಎನ್ಕೌಂಟರ್ ಎಂದೂ ಕರೆದಿದೆ.
ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡು, ತನ್ನ ಪ್ರತಿಭಟನೆಯನ್ನು ದಾಖಲಿಸಿತು ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯ (ಎಫ್ಒ) ಹೇಳಿದೆ.
‘ಮೊಹಮ್ಮದ್ ಅಲಿ ಹುಸೇನ್ ಎಂಬುವರು 2006ರಿಂದ ಕಾಶ್ಮೀರದ ಕೋಟ್ ಭಲ್ವಾಲ್ ಜೈಲಿನಲ್ಲಿದ್ದರು. ಅವರನ್ನು ಭಾರತೀಯ ಸೇನೆಯವರು ನಕಲಿ ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ’ ಎಂದು ಎಫ್ಒ ಪ್ರಕಟಣೆಯಲ್ಲಿ ಆರೋಪಿಸಿದೆ.
‘ಭಾರತ ಸರ್ಕಾರವು ಹುಸೇನ್ ಅವರ ಮರಣೋತ್ತರ ಪರೀಕ್ಷೆಯ ವರದಿ ಸೇರಿದಂತೆ ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ತನ್ನೊಂದಿಗೆ ಹಂಚಿಕೊಳ್ಳಬೇಕು. ಜೊತೆಗೆ ಈ ಸಂಬಂಧ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು’ ಎಂದೂ ಪಾಕಿಸ್ತಾನ ಆಗ್ರಹಿಸಿದೆ.