ಪೆಶಾವರ: ತಾಲಿಬಾನ್ ಉಗ್ರರು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಒತ್ತೆಯಾಳಾಗಿರಿಸಿಕೊಂಡಿರುವ ಪೊಲೀಸರನ್ನು ಬಿಡುಗಡೆಗೊಳಿಸಲು ಪಾಕಿಸ್ತಾನದ ಭದ್ರತಾ ಪಡೆಗಳು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಮಂಗಳವಾರ ಪ್ರಾರಂಭಿಸಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಉದ್ಭವಿಸಿರುವ ಬಿಕ್ಕಟ್ಟನ್ನು ಸರ್ಕಾರ ಮತ್ತು ಉಗ್ರರು ಮಾತಕತೆಯ ಮೂಲಕ ಬಗೆಹರಿಸಿಕೊಳ್ಳಲು ವಿಫಲವಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಾನ್ ಪತ್ರಿಕೆ ತಿಳಿಸಿದೆ.
ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆಯು (ಸಿಟಿಡಿ) ಬನ್ನು ಕಂಟೋನ್ಮೆಂಟ್ನ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದ ತಾಲಿಬಾನ್ ಉಗ್ರನೊಬ್ಬ ಭಾನುವಾರ ಪೊಲೀಸರ ಬಳಿಯಿದ್ದ ಎ.ಕೆ–47 ಅನ್ನು ಅಪಹರಿಸಿ, ಗುಂಡಿನ ದಾಳಿ ನಡೆಸಿದ್ದ.
ಅಲ್ಲದೇ, ಆತ ಠಾಣೆಯಲ್ಲಿದ್ದ ಇತರ ಉಗ್ರರನ್ನು ಬಿಡುಗಡೆಗೊಳಿಸಿದ್ದ. ಎಲ್ಲ ಉಗ್ರರೂ ಸೇರಿ ಠಾಣೆಯನ್ನು ತಮ್ಮ ಹತೋಟಿಗೆ ತೆಗೆದುಕೊಂಡು, ಹಲವು ಪೊಲೀಸರನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ನಂತರ ತಾವು ಸುರಕ್ಷಿತವಾಗಿ ಅಫ್ಗಾನಿಸ್ತಾನಕ್ಕೆ ಹೋಗಲು ಅನುವು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದರು.
ಸದ್ಯ, ಒತ್ತೆಯಾಳುಗಳ ಅಥವಾ ಉಗ್ರರ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.