ಕೊಲಂಬೊ: ಆರ್ಥಿಕ ಬಿಕ್ಕಟ್ಟಿಗೆ ನಲುಗಿರುವ ಶ್ರೀಲಂಕಾಕ್ಕೆ ಅಗತ್ಯವಿರುವ ರಾಸಾಯನಿಕ ಗೊಬ್ಬರ ಪೂರೈಸುವುದಾಗಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಮುಂಬರುವ ಕೊಯ್ಲು ಹಂಗಾಮಿಗೆ ಸಂಬಂಧಿಸಿ ಚರ್ಚಿಸಲು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಡಸಿದ ಸಭೆಯಲ್ಲಿ ಅಧ್ಯಕ್ಷ ರಾಜಪಕ್ಸ ಈ ವಿಷಯ ತಿಳಿಸಿದರು ಎಂದು ಅಧ್ಯಕ್ಷರ ಕಚೇರಿ ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
‘ಮುಂದಿನ ಬಿತ್ತನೆ ಹಂಗಾಮಿಗಾಗಿ ರಾಸಾಯನಿಕ ಗೊಬ್ಬರ ಪೂರೈಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಗೊಬ್ಬರ ದಾಸ್ತಾನು 20 ದಿನಗಳ ಒಳಗಾಗಿ ಕೊಲಂಬೊ ತಲುಪಲಿದ್ದು, ನಂತರ ವಿತರಣೆ ಆರಂಭಿಸಲಾಗುವುದು ಎಂದು ರಾಜಪಕ್ಸ ಅವರು ಸಭೆಗೆ ತಿಳಿಸಿದರು’ ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ತೀವ್ರ ಹಣಕಾಸು ಬಿಕ್ಕಟ್ಟಿನಿಂದಾಗಿ ರಾಸಾಯನಿಕ ಗೊಬ್ಬರ ಸೇರಿದಂತೆ ಕೃಷಿಗೆ ಅಗತ್ಯವಿರುವ ಪರಿಕರಗಳ ಕೊರತೆ ಕಂಡುಬಂದಿದೆ. ಇದರಿಂದಾಗಿ ಶ್ರೀಲಂಕಾದಲ್ಲಿ ಬೆಳೆಹಾನಿಯಾಗಿದ್ದು, ಆಹಾರದ ಕೊರತೆ ಸಮಸ್ಯೆ ಉದ್ಭವಿಸಿದೆ.