ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಪ್ರಕ್ಷುಬ್ದತೆ ಉಲ್ಬಣಿಸುತ್ತಿರುವುದರ ಮಧ್ಯೆ, ನಗದು ಕೊರತೆಯಿಂದ ನಲುಗುತ್ತಿರುವ ದೇಶದ ಸಲುವಾಗಿ ಆಡಳಿತಾರೂಢ ಮೈತ್ರಿಕೂಟ ರಾಜಕೀಯ ತ್ಯಾಗಕ್ಕೆ ಸಿದ್ಧವಿದೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಘೋಷಿಸಿದ್ದಾರೆ.
ಮಂಗಳವಾರ ಅವರು ‘ವ್ಯಾಪಾರ ಮತ್ತು ಕೃಷಿಗಾಗಿ ಪ್ರಧಾನಮಂತ್ರಿ ಯುವ ಸಾಲ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದರು.
ಈ ಸಾಲ ಯೋಜನೆಯು ಯುವಕರಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಗುರಿ ಹೊಂದಿದೆ. ವ್ಯಾಪಾರ ಮತ್ತು ಕೃಷಿ ಆರಂಭಿಸುವ ಯುವಜನರಿಗೆ ಸಾಲ ನೀಡಲು ನಿಯಮಗಳನ್ನು ಸರಳಗೊಳಿಸಲಾಗಿದೆ ಎಂದು ಅವರು ಹೇಳಿದರು.
ಸಾಲ ಯೋಜನೆಗಳ ಪುನರ್ನವೀಕರಣಕ್ಕೆ ಕಠಿಣ ಷರತ್ತುಗಳನ್ನು ಪಾಲಿಸಬೇಕೆಂಬ ಸೂಚನೆ ನೀಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಕಹಿ ಮಾತ್ರೆ ನುಂಗಲು (ಕಠಿಣ ಸವಾಲು ಎದುರಿಸಲು) ತಮ್ಮ ಸರ್ಕಾರ ಅಂತಿಮವಾಗಿ ಸಿದ್ಧವಾಗಿದೆ ಎಂದು ಶಹಬಾಜ್ ಹೇಳಿದರು.
‘ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರಾಜಕಾರಣ ಸಲ್ಲದು. ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಸ್ಥಿರತೆ ತರಲು, ದೇಶವನ್ನು ಉಳಿಸಲು ಎಲ್ಲ ರಾಜಕೀಯ ಪಕ್ಷಗಳು ತ್ಯಾಗಕ್ಕೆ ಸಿದ್ಧವಾಗಬೇಕು’ ಎಂದು ಅವರು ಮನವಿ ಮಾಡಿದರು.