ಮಾಸ್ಕೊ (ಎಎಫ್ಪಿ): ಉಕ್ರೇನ್ ಮೇಲಿನ ಸೇನಾ ಕಾರ್ಯಾಚರಣೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೋಮವಾರ ಸಮರ್ಥಿಸಿಕೊಂಡರು.
ನಾಜಿ ಜರ್ಮನಿಯನ್ನು ಸೋಲಿಸಿದ ಸೋವಿಯತ್ ವಿಜಯದ 77ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿನ ರೆಡ್ ಸ್ಕ್ವೇರ್ನಲ್ಲಿ ನಡೆದ ಸೇನಾ ಪರೇಡ್ ವೀಕ್ಷಿಸಿ, ಯುದ್ಧ ಸ್ಮಾರಕಕ್ಕೆ ಹೂಗುಚ್ಛವಿರಿಸಿ ಅವರು ಮಾತನಾಡಿದರು. ಈ ವೇಳೆ ಅವರು ಯಾವುದೇ ಪ್ರಮುಖ ಘೋಷಣೆಗಳನ್ನು ಪ್ರಕಟಿಸಲಿಲ್ಲ.
ಉಕ್ರೇನ್ ಮತ್ತು ಪಶ್ಚಿಮದ ರಾಷ್ಟ್ರಗಳ ವಿರುದ್ಧ ವಾಗ್ದಾಳಿ ನಡೆಸಿದ ಪುಟಿನ್, ‘ಉಕ್ರೇನ್ ಮತ್ತುಅದರ ಪಾಶ್ಚಾತ್ಯ ಮಿತ್ರ ರಾಷ್ಟ್ರಗಳು, ರಷ್ಯಾ ಭಾಷಿಗರಿರುವ ಡಾನ್ಬಾಸ್ ಮತ್ತು 2014ರಲ್ಲಿಮಾಸ್ಕೊ ಸ್ವಾಧೀನಕ್ಕೆ ಪಡೆದ ಕ್ರಿಮಿಯಾ ಸೇರಿ ನಮ್ಮ ಐತಿಹಾಸಿಕ ಭೂಮಿಯನ್ನು ಆಕ್ರಮಿಸುವ ತಯಾರಿಯಲ್ಲಿದ್ದವು.ಅದನ್ನು ತಡೆಯಲು ಉಕ್ರೇನಿನಲ್ಲಿ ವಿಶೇಷ ಸೇನಾ ಕಾರ್ಯಾಚರಣೆ ಆರಂಭಿಸಬೇಕಾಯಿತು’ಎಂದು ತಿಳಿಸಿದರು.
‘ಕೀವ್ ಆಡಳಿತಗಾರರುನವ ನಾಜಿಗಳು’ ಎಂದು ಮತ್ತೊಮ್ಮೆ ದೂಷಿಸಿದ ಪುಟಿನ್, ‘ಉಕ್ರೇನ್ನಲ್ಲಿನ ನಮ್ಮ ಪಡೆಗಳ ಹೋರಾಟವನ್ನು ರಷ್ಯಾದ ಜನತೆ ಮಹಾನ್ ದೇಶಭಕ್ತಿಯ ಯುದ್ಧವೆಂದು ಪರಿಗಣಿಸಿದ್ದಾರೆ. ರಷ್ಯನ್ನರು ದೇಶ ಮತ್ತು ಸಾಂಪ್ರಾದಾಯಿಕ ಮೌಲ್ಯಗಳ ಮೇಲಿನ ಪ್ರೀತಿಯನ್ನುಎಂದಿಗೂ ಬಿಟ್ಟುಕೊಡುವುದಿಲ್ಲ’ ಎಂದರು.
‘ಉಕ್ರೇನ್ಗೆ ನ್ಯಾಟೊ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ವಿದೇಶಿ ಸಲಹೆಗಾರರ ನಿಯೋಜನೆ, ನಮ್ಮ ಗಡಿಗಳಲ್ಲಿ ನಮಗೆ ನೇರ ಬೆದರಿಕೆಯನ್ನು ಖಂಡಿತವಾಗಿಯೂ ಸಹಿಸಲಾಗದು.ಬಲಿಷ್ಠ ಮತ್ತು ಸ್ವತಂತ್ರ ದೇಶದಸಾರ್ವಭೌಮತೆಗಾಗಿ, ಉಕ್ರೇನ್ ಅನ್ನು ನಿಶ್ಯಸ್ತ್ರಗೊಳಿಸುವುದನ್ನುಬಿಟ್ಟು ರಷ್ಯಾಕ್ಕೆ ಬೇರೆ ದಾರಿಯೇ ಇರಲಿಲ್ಲ’ ಎಂದು ಸಮಜಾಯಿಷಿ ನೀಡಿದರು.
ಸೇನಾ ಪಡೆಗಳನ್ನು ಉದ್ದೇಶಿಸಿ, ‘ಇಂದಿನ ಪರೇಡ್ನಲ್ಲಿ ಭಾಗವಹಿಸಿರುವ ಕೆಲವು ಪಡೆಗಳು ಉಕ್ರೇನ್ನಲ್ಲಿನ ಕಾರ್ಯಾಚರಣೆಯ ಮುಂಚೂಣಿಯಿಂದ ನೇರವಾಗಿ ಬಂದಿವೆ. ಮಾತೃಭೂಮಿಗಾಗಿ, ಅದರ ಭವಿಷ್ಯಕ್ಕಾಗಿ ನೀವು ಹೋರಾಡುತ್ತಿದ್ದೀರಿ. ಈ ಸಂಘರ್ಷ ಎರಡನೇ ಮಹಾಯುದ್ಧದ ಮುಂದುವರಿದ ಭಾಗ. ಆ ಯುದ್ಧದಿಂದ ಕಲಿತ ಪಾಠವನ್ನು ಯಾರೂ ಮರೆಯುವುದಿಲ್ಲ’ ಎಂದು ಸೈನಿಕರನ್ನು ಹುರಿದುಂಬಿಸಿದರು.
‘ರಷ್ಯಾ ಸಂಘರ್ಷವನ್ನು ವಿಸ್ತರಿಸಲು ನೋಡುತ್ತಿಲ್ಲ. ವಿಶ್ವ ಸಮರದ ಭೀಕರತೆ ಮತ್ತೇ ಸಂಭವಿಸದಂತೆ ತಡೆಯುವುದು ಮುಖ್ಯ’ ಎಂದು ಪುಟಿನ್ ಒತ್ತಿ ಹೇಳಿದರು.
‘ಹುತಾತ್ಮ ಸೈನಿಕರ ಕುಟುಂಬಗಳಿಗೆ ಭರಿಸಲಾಗದ ನಷ್ಟವಾಗಿದೆ. ಹುತಾತ್ಮ ಸೈನಿಕರ ಕುಟುಂಬಕ್ಕೆ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲಿದೆ’ ಎಂದು ವಾಗ್ದಾನ ಮಾಡಿದರು.
11 ಸಾವಿರ ಸೈನಿಕರು, 130ಕ್ಕೂ ಹೆಚ್ಚು ಸೇನಾ ವಾಹನಗಳೊಂದಿಗೆ ರೆಡ್ ಸ್ಕ್ವೇರ್ನಲ್ಲಿ ಪರೇಡ್ ನಡೆಯಿತು. ಹವಾಮಾನ ವೈಪರೀತ್ಯದಿಂದಾಗಿ ವಾಯುಪಡೆಯ ವೈಮಾನಿಕ ಕವಾಯತು ರದ್ದುಗೊಳಿಸಲಾಯಿತು.
ರಕ್ಷಣಾ ಸಚಿವ ಸೆರ್ಗೈ ಶೋಯಿಗು, ಭೂ ಸೇನೆಯ ಮುಖ್ಯಸ್ಥ ಒಲೆಗ್ ಸಲ್ಯುಕೋವ್ ಪರೇಡ್ಗೆ ಚಾಲನೆ ನೀಡಿದರು. ರೆಡ್ ಸ್ಕ್ವೇರ್ನಾದ್ಯಂತ ತೆರೆದ ಕಾರುಗಳಲ್ಲಿ ನಿಂತಿದ್ದ ಸೈನಿಕರು ವಿಜಯಘೋಷ ಮೊಳಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.