ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ: ಅಕ್ಷರಶಃ ಸ್ಮಶಾನವಾದ ಟರ್ಕಿ, ಸಿರಿಯಾ ನಗರಗಳು

ಸಂತ್ರಸ್ತರ ಆಕ್ರಂದನ, ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಅವಿರತ ಶ್ರಮ
Last Updated 6 ಫೆಬ್ರುವರಿ 2023, 21:11 IST
ಅಕ್ಷರ ಗಾತ್ರ

ದಿಯಾರ್‌ಬಕಿರ್‌ (ಎಎಫ್‌ಪಿ): ಪ್ರಬಲ ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ತತ್ತರಿಸಿವೆ. ಗಾಢ ನಿದ್ರೆಯಲ್ಲಿದ್ದ ಸಾವಿರಾರು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿ ಬಾರದ ಲೋಕಕ್ಕೆ ತೆರಳಿದ್ದಾರೆ. ನಸುಕಿನಲ್ಲಿ ಸಂಭವಿಸಿದ ಭೂಕಂಪದಿಂದ ಟರ್ಕಿಯ ಪ್ರಮುಖ ನಗರಗಳು ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿವೆ.

ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವವರು ಭಾರಿ ಸಾಧನಗಳನ್ನು ಬಳಸಿ ಮತ್ತು ಕೆಲವೊಮ್ಮೆ ಬರಿಗೈ
ನಲ್ಲಿಯೇ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಅವಿರತ ಶ್ರಮ ವಹಿಸುತ್ತಿದ್ದು, ಎಲ್ಲೆಂದರಲ್ಲಿ ಸಂತ್ರಸ್ತರ ಆಕ್ರಂದನಗಳು ಕಿವಿಗಪ್ಪಳಿಸುತ್ತಿವೆ.

‘ಭೂಕಂಪ ವಲಯದಲ್ಲಿವಾಸಿಸುತ್ತಿರುವುದರಿಂದ, ಈಗಲೂ ನಾನು ನಡುಗುತ್ತಿದ್ದೇನೆ. ಈ ರೀತಿಯ ಭಯಾನಕ ಅನುಭವ ಆಗುತ್ತಿರುವುದು ಇದೇ ಮೊದಲು’ ಎಂದು ಟರ್ಕಿಯ ಕಹ್ರಾಮನ್‌ಮಾರಸ್‌ನ ವರದಿಗಾರ್ತಿ ಮೆಲೀಸಾ ಸಲ್ಮಾನ್ ವಿವರಿಸಿದ್ದಾರೆ.

‘ನನ್ನ ತಂಗಿ, ಆಕೆಯ ಗಂಡ, 3 ಮಕ್ಕಳು ಮತ್ತು ಅತ್ತೆ, ಮಾವ ಭಗ್ನಾವಶೇಷಗಳಡಿ ಸಿಲುಕಿದ್ದಾರೆ’
ಎಂದು ಇಲ್ಲಿನ ನಿವಾಸಿ ಮುಹಿತ್ತೀನ್‌ ಒರಾಕ್‌ಸಿ ಎಂಬುವವರು ಆತಂಕದಿಂದ ಹೇಳಿದರು.

‘ಭೂಮಿ ಕಂಪಿಸುವಾಗ ನನ್ನ ಕುಟುಂಬ ನಿದ್ರಿಸುತ್ತಿತ್ತು. ಪತ್ನಿ ಮತ್ತು ಮಕ್ಕಳನ್ನು ಎಚ್ಚರಿಸಿ ಬಾಗಿಲು ತೆರೆದು ಹೊರಬಂದೆವು. ಬಳಿಕ ಇಡೀ ಕಟ್ಟಡ ಕುಸಿಯಿತು’ ಎಂದು ಒಸಾಮ ಅಬ್ದೆಲ್‌
ಹಮಿದ್‌ ಅವರು ಘಟನೆಯ ತೀವ್ರತೆ ವಿವರಿಸಿದರು.

ಟರ್ಕಿಯಲ್ಲಿನ ತೀವ್ರ ಚಳಿಯ ಕಾರಣ ರಕ್ಷಣಾ ಕಾರ್ಯಾಚರಣೆ ಅಡ್ಡಿಯಾಗಿದೆ. ಭೂಕಂಪದಿಂದ 3 ಪ್ರಮುಖ ವಿಮಾನ ನಿಲ್ದಾಣಗಳು ಹಾನಿಗೊಳಗಾಗಿವೆ. ಹೀಗಾಗಿ ಅಗತ್ಯ ನೆರವು ಸಾಗಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು
ತಿಳಿಸಿದರು.

‘ವಾಯವ್ಯ ಸಿರಿಯಾದ ವಿವಿಧ ನಗರ ಮತ್ತು ಗ್ರಾಮಗಳಲ್ಲಿರುವ ಹಲವು ಕಟ್ಟಡಗಳು ಕುಸಿದಿದ್ದು, ಈಗಲೂ ಹಲವು ಕುಟುಂಬಗಳು ಭಗ್ನಾವಶೇಷಗಳಡಿ ಸಿಲುಕಿವೆ’ ಎಂದು ಇಸ್ಮೈಲಿಯಾ ಅಲಾಬ್ದಲ್ಲಾ ಹೇಳಿದರು. ಮಲ್ತಾಯ ಪ್ರಾಂತ್ಯದ 13ನೇ ಶತಮಾನದ ಪ್ರಸಿದ್ಧ ಮಸೀದಿಯು ಭಾಗಶಃ ಕುಸಿದಿದೆ. 14 ಅಂತಸ್ತಿನ 28 ಅಪಾರ್ಟ್‌ಮೆಂಟ್‌ಗಳಿದ್ದ ಕಟ್ಟಡವೂ ಧರೆಗುರುಳಿದೆ.

ಸಿರಿಯಾದ ಅಲೆಪ್ಪೊ, ಲಟಕಿಯಾ, ಹಮಾ ಮತ್ತು ಟರ್ಟಸ್‌ ಪ್ರಾಂತ್ಯಗಳಲ್ಲಿ ಅಪಾರ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಎರಡು ವಾರ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಟರ್ಕಿ, ಸಿರಿಯಾಗೆ 45 ದೇಶಗಳಿಂದ ನೆರವು ಘೋಷಣೆ: ‘ಪ್ರಬಲ ಭೂಕಂಪದಲ್ಲಿ ಸಿಲುಕಿರುವವರ ಶೋಧ ಮತ್ತು ರಕ್ಷಣೆಗೆ ಅಮೆರಿಕ, ಜರ್ಮನಿ ಸೇರಿದಂತೆ 45 ದೇಶಗಳು ನೆರವು ನೀಡುವುದಾಗಿ ಘೋಷಿಸಿವೆ’ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ.

‘ಭೂಕಂಪ ಪೀಡಿತ ಸಿರಿಯಾಗೆ ನೆರವು ನೀಡಲು ಇಸ್ರೇಲ್‌ ನಿರ್ಧರಿಸಿದೆ’ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆಂಜಮಿನ್‌ ಅವರು ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್‌ ರವಾನೆಗೆ ನಿರ್ಧಾರ

ಟರ್ಕಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ತಲಾ 100 ಜನರನ್ನು ಒಳಗೊಂಡ ಎರಡು ತಂಡ, ವೈದ್ಯಕೀಯ ತಂಡ ಮತ್ತು ಪರಿಹಾರ ಸಾಮಗ್ರಿಗಳನ್ನು ತಕ್ಷಣವೇ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಧಾನಿ ಮೋದಿ ಅವರ ಮುಖ್ಯ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರು ಸೌತ್‌ ಬ್ಲಾಕ್‌ನಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಕಾರ್ಯದರ್ಶಿ, ಗೃಹ, ರಕ್ಷಣೆ ಮತ್ತು ವಿದೇಶಾಂಗ, ಆರೋಗ್ಯ, ಕುಟುಂಬ ಕಲ್ಯಾಣ ಸಚಿವಾಲಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿ, ಉಭಯ ದೇಶಗಳಿಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT