ಕೊಲಂಬೊ: ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾನಿಲ್ ಅವರಿಗೆ ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಜಯಂತ ಜಯಸೂರ್ಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಸದ್ಯ ಸಿಂಗಪುರದಲ್ಲಿರುವ ಗೊಟಬಯ ರಾಜಪಕ್ಸ ಅವರು ಸ್ಪೀಕರ್ ಮಹಿಂದಾ ಯಾಪಾ ಅಬೆವರ್ದನ ಅವರಿಗೆ ಇ–ಮೇಲ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದರು. ಗೊಟಬಯ ಅವರು ಇ–ಮೇಲ್ ಮೂಲಕ ಕಳುಹಿಸಿರುವ ರಾಜೀನಾಮೆಯನ್ನು ಅಂಗೀಕರಿಸಿದ್ದಾಗಿ ಸ್ಪೀಕರ್ ಅಬೆವರ್ದನ ಶುಕ್ರವಾರ ಹೇಳಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಸಂಸತ್ಅನ್ನು ಉದ್ದೇಶಿಸಿ ಮಾತನಾಡಿದ ರಾನಿಲ್ ಅವರು, ‘ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ನನ್ನ ಆದ್ಯತೆ’ ಎಂದರು.
‘ನಾನು ನೂರಕ್ಕೆ ನೂರರಷ್ಟು, ಶಾಂತ ರೀತಿಯಲ್ಲಿ ಪ್ರತಿಭಟಿಸುವವರ ಪರವಾಗಿದ್ದೇನೆ. ಪ್ರತಿಭಟನಕಾರರು ಹಾಗೂ ಗಲಭೆಕೋರರ ನಡುವೆ ವ್ಯತ್ಯಾಸವಿದೆ. ಹೀಗಾಗಿ ಹಿಂಸಾಚಾರ ಹಾಗೂ ವಿಧ್ವಂಸಕ ಕೃತ್ಯಗಳನ್ನು ಹತ್ತಿಕ್ಕುವ ಸಲುವಾಗಿ ಸಶಸ್ತ್ರ ಪಡೆಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ’ ಎಂದರು.
‘ಅಧ್ಯಕ್ಷರ ಬದಲಾಗಿ ಸಂಸತ್ಗೆ ಹೆಚ್ಚಿನ ಅಧಿಕಾರ ನೀಡುವ, ಸಂವಿಧಾನದ 19ನೇ ತಿದ್ದುಪಡಿಯನ್ನು ಪರಾಮರ್ಶಿಸುವುದು ಸಹ ನನ್ನ ಮೊದಲ ಆದ್ಯತೆಯಾಗಿದೆ. ಈ ಕುರಿತ ಕರಡು ಮಸೂದೆಯನ್ನು ಶೀಘ್ರವೇ ಸದನದಲ್ಲಿ ಮಂಡಿಸಲಾಗುವುದು’ ಎಂದು ಹೇಳಿದರು.
ಜುಲೈ 20ರಂದು ನೂತನ ಅಧ್ಯಕ್ಷರ ಆಯ್ಕೆ: ನೂತನ ಅಧ್ಯಕ್ಷರ ಆಯ್ಕೆ ಜುಲೈ 20ರಂದು ನಡೆಯುವುದು. ಜುಲೈ 19ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪೀಕರ್ ಅಬೆವರ್ದನ ಹೇಳಿದ್ದಾರೆ.
ಅಧ್ಯಕ್ಷ ಸ್ಥಾನ ಖಾಲಿ ಇರುವ ಕುರಿತು ಸಂಸತ್ಗೆ ಅಧಿಕೃತವಾಗಿ ಶನಿವಾರ ಮಾಹಿತಿ ನೀಡಲಾಗುವುದು ಎಂದೂ ಹೇಳಿದರು.