ಢಾಕಾ: ಪ್ರವಾದಿ ಮಹಮ್ಮದ್ ಕುರಿತು ಬಿಜೆಪಿಯ ಮಾಜಿ ನಾಯಕರ ವಿವಾದಾತ್ಮಕ ಹೇಳಿಕೆಯಿಂದ ಉಂಟಾದ ವಿವಾದವು ಭಾರತದ ಆಂತರಿಕ ವಿಚಾರವಾಗಿದೆ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಹಸನ್ ಮಹಮುದ್ ಹೇಳಿದ್ದಾರೆ. ಈ ಮೂಲಕ ಈ ವಿಚಾರದಲ್ಲಿ ಇತರೆ ಮುಸ್ಲಿಂ ದೇಶಗಳ ರೀತಿ ಬಾಂಗ್ಲಾದೇಶ ಮೂಗು ತೂರಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ಬಾಂಗ್ಲಾಕ್ಕೆ ಭೇಟಿ ನೀಡಿದ್ದ ಭಾರತೀಯ ಪತ್ರಕರ್ತರನ್ನು ಉದ್ದೇಶಿಸಿಸೋಮವಾರ ಮಾತನಾಡಿದ ಅವರು, ‘ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯಿದೆ’ ಎಂದು ಹೇಳಿದರು.
ಈ ವಿಚಾರದಲ್ಲಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ರಾಜಿ ಮಾಡಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರವಾದಿ ವಿರುದ್ಧದ ಹೇಳಿಕೆ ವಿಚಾರದಲ್ಲಿ ಸರ್ಕಾರ ರಾಜಿ ಮಾಡಿಕೊಂಡಿಲ್ಲ ಮತ್ತು ಎಂದಿಗೂ ಮಾಡಿಕೊಳ್ಳುವುದೂ ಇಲ್ಲ. ಸಾರ್ವಜನಿಕ ಸಭೆಯಲ್ಲಿ ಈ ವಿಚಾರವನ್ನು ನಾನು ಖಂಡಿಸಿದ್ದೇನೆ ಎಂದರು.