ಕಠ್ಮಂಡು : ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಅವರ ನೇತೃತ್ವದ ಮೈತ್ರಿಕೂಟ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲು ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (ಆರ್ಪಿಪಿ) ನಿರ್ಧರಿಸಿದೆ.
ಪಕ್ಷದ ಮುಖ್ಯಸ್ಥ ರಾಜೇಂದ್ರ ಲಿಂಗ್ಡೆನ್ ಸೇರಿದಂತೆ ನಾಲ್ವರು ಸಚಿವರು ಶನಿವಾರ ‘ಪ್ರಚಂಡ’ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಪಕ್ಷದ ಕೇಂದ್ರೀಯ ಕಾರ್ಯಕಾರಿ ಸಮಿತಿ ಮತ್ತು ಸಂಸದರು ನಡೆಸಿದ ಜಂಟಿ ಸಭೆಯಲ್ಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
‘ಆಡಳಿತಾರೂಢ ಸರ್ಕಾರದಲ್ಲಿನ ರಾಜಕೀಯ ಸಮೀಕರಣ ಮತ್ತು ಸಹಕಾರದಲ್ಲಿ ಹಠಾತ್ ಬದಲಾವಣೆಗಳಾದ್ದರಿಂದ ಆರ್ಪಿಪಿ ಈ ನಿರ್ಧಾರ ಕೈಗೊಂಡಿದೆ’ ಎಂದು ಪಕ್ಷದ ವಕ್ತಾರ ಮೋಹನ್ ಕುಮಾರ್ ಶ್ರೇಷ್ಠಾ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ಇತ್ತೀಚಿನ ಬದಲಾವಣೆಗಳು ಆಂತರಿಕ ಅಸ್ಥಿರತೆಯ ಸ್ಪಷ್ಟ ಲಕ್ಷಣಗಳಾಗಿವೆ ಎಂದು ಪಕ್ಷ ನಂಬುತ್ತದೆ. ಇಂಥ ಬದಲಾದ ಸನ್ನಿವೇಶದಲ್ಲಿ ಅಧಿಕಾರದಲ್ಲಿ ಉಳಿಯುವುದು ಸೂಕ್ತವಲ್ಲ’ ಎಂದು ಅವರು ಹೇಳಿದರು.
275 ಮಂದಿ ಸದಸ್ಯ ಬಲದ ಸಂಸತ್ತಿನಲ್ಲಿ ಆರ್ಪಿಪಿಯು 14 ಕ್ಷೇತ್ರಗಳಲ್ಲಿ ಜಯಗಳಿಸಿದೆ.