ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ದಿಗೆ ಅಳವಡಿಸಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ: ಷಟೌಕ್ವಾ ಅಧ್ಯಕ್ಷರ ಮಾಹಿತಿ

Last Updated 14 ಆಗಸ್ಟ್ 2022, 3:21 IST
ಅಕ್ಷರ ಗಾತ್ರ

ಮೇವಿಲ್‌(ಅಮೆರಿಕ): ಲೇಖಕ ಸಲ್ಮಾನ್ ರಶ್ದಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ. ಅವರು ಈಗ ಮಾತನಾಡುತ್ತಿದ್ದಾರೆ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.

ಪಶ್ಚಿಮ ನ್ಯೂಯಾರ್ಕ್‌ನ ಷಟೌಕ್ವಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆಸಲಾಗಿತ್ತು. ಅವರನ್ನು ಚಾಕುವಿನಿಂದ ಹಲವು ಬಾರಿ ಇರಿಯಲಾಗಿತ್ತು.

ರಕ್ತದ ಮಡುವಿನಲ್ಲಿದ್ದ ರಶ್ದಿ ಅವರನ್ನು ವಾಯುವ್ಯ ಪೆನ್ಸಿಲ್ವೇನಿಯಾದ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ನ್ಯೂಜೆರ್ಸಿಯ ಫೇರ್‌ಫೀಲ್ಡ್‌ನ ಹಾದಿ ಮಟರ್‌ (24) ಎಂಬಾತ ನಡೆಸಿದ್ದ ದಾಳಿಯಲ್ಲಿ ರಶ್ದಿ ಅವರ ತೋಳಿನ ನರಗಳು, ಪಿತ್ತಜನಕಾಂಗ ಹಾನಿಗೊಂಡಿತ್ತು. ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರ ಏಜೆಂಟ್‌ ಆ್ಯಂಡ್ರ್ಯೂ ವೈಲಿ ಶುಕ್ರವಾರ ತಿಳಿಸಿದ್ದರು.

ಆದರೆ, ಸದ್ಯ ಅವರು ಚೇತರಿಕೆ ಕಂಡಿದ್ದಾರೆ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ. ‘ಸಲ್ಮಾನ್ ರಶ್ದಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆಯಲಾಗಿದೆ. ಮತ್ತು, ಅವರು ಮಾತನಾಡುತ್ತಿದ್ದಾರೆ! ಅವರು ಗುಣಮುಖರಾಗಲೆಂದು ಷಟೌಕ್ವಾದ ಎಲ್ಲರು ನಿರಂತರವಾಗಿ ಪ್ರಾರ್ಥಿಸುತ್ತಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಮೈಕೆಲ್ ಹಿಲ್ ಶನಿವಾರ ರಾತ್ರಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲಿ ಕೂಡ ಈ ಮಾಹಿತಿ ಖಚಿತಪಡಿಸಿದ್ದಾರೆ. ಆದರೆ, ರಶ್ದಿ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಇನ್ನೊಂದೆಡೆ, ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿ ಪೂರ್ವಯೋಜಿತವಾಗಿದೆ. ಅವರ ಮೇಲೆ 10 ಬಾರಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದೇನೆ ಎಂದು ವಿಚಾರಣೆ ವೇಳೆ ಆರೋಪಿ ಹಾದಿ ಮಟರ್‌ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT