ಸಿಂಗಪುರ: 'ಖಾಸಗಿ ಭೇಟಿಗಾಗಿ ಸಿಂಗಪುರ ಪ್ರವೇಶಿಸಲು ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಗುರುವಾರ ಅನುಮತಿ ನೀಡಲಾಗಿದೆ. ಅವರಿಗೆ ಆಶ್ರಯ ನೀಡಲಾಗಿಲ್ಲ’ ಎಂದು ಸಿಂಗಪುರ ಸ್ಪಷ್ಟಪಡಿಸಿದೆ.
ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇಶ ತೊರೆದಿದ್ದ ಗೊಟಬಯ ರಾಜಪಕ್ಸ ಮೊದಲಿಗೆ ಮಾಲ್ಡೀವ್ಸ್ಗೆ ಹಾರಿದ್ದರು. ಅಲ್ಲಿಯೂ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಂಗಪುರಕ್ಕೆ ತೆರಳಿದ್ದರು.
‘ಖಾಸಗಿ ಭೇಟಿಯ ಮೇಲೆ ಸಿಂಗಪುರ ಪ್ರವೇಶಿಸಲು ರಾಜಪಕ್ಸ ಅವರಿಗೆ ಅನುಮತಿ ನೀಡಿರುವುದು ದೃಢಪಟ್ಟಿದೆ‘ ಎಂದು ಸಿಂಗಪುರದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
‘ಅವರು ಆಶ್ರಯವನ್ನು ಕೇಳಿಲ್ಲ ಮತ್ತು ಅವರಿಗೆ ಯಾವುದೇ ಆಶ್ರಯವನ್ನು ನೀಡಲಾಗಿಲ್ಲ. ಸಿಂಗಪುರವು ಸಾಮಾನ್ಯವಾಗಿ ಆಶ್ರಯಕ್ಕಾಗಿ ಅನುಮತಿಯನ್ನು ನೀಡುವುದಿಲ್ಲ’ ಎಂದು ಸಚಿವಾಲಯ ಹೇಳಿದೆ.