ಕೊಲಂಬೊ: ‘ಇತ್ತೀಚೆಗೆ ರಾಂಬುಕ್ಕನಾದಲ್ಲಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ (ಎನ್ಎಸ್ಸಿ) ಸಭೆಯಲ್ಲಿ ಭಾಗಿಯಾಗದೇ ನಾನು ತಪ್ಪು ಮಾಡಿದೆ’ ಎಂದು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಹೇಳಿದ್ದಾರೆ.
ಸಂಸತ್ನಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನನಗೆ ಈ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಸಭೆಗೆ ನಾನೇ ಹಾಜರಾಗಿರಲಿಲ್ಲ. ಇದು ನನ್ನ ತಪ್ಪು. ಆದಾಗ್ಯೂ, ಈ ಸಭೆಯಲ್ಲಿ ಚರ್ಚಿಸಿದ ವಿಚಾರದ ಬಗ್ಗೆ ಸಂಜೆ ನನಗೆ ವಿವರಿಸಲಾಗಿದೆ’ ಎಂದು ಹೇಳಿದರು.
ರಾಂಬುಕ್ಕನಾ ಹಿಂಸಾಚಾರ ಘಟನೆ ಬಗ್ಗೆ ಚರ್ಚಿಸಲು ಆಯೋಜಿಸಿದ್ದ ಎನ್ಎಸ್ಸಿ ಸಭೆಗೆಪ್ರಧಾನಿಯವರನ್ನು ಏಕೆ ಆಮಂತ್ರಿಸಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಜಿತ್ ಪ್ರೇಮದಾಸ ಅವರು ಪ್ರಶ್ನಿಸಿದ ಬೆನ್ನಲ್ಲೇ, ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಈ ಹೇಳಿಕೆ ನೀಡಿದ್ದಾರೆ.
ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ರಾಂಬುಕ್ಕನಾದಲ್ಲಿ ಇತ್ತೀಚೆಗೆ ಭಾರಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನಕಾರರನ್ನು ಚದುರಿಸುವ ಸಲುವಾಗಿ ಪೊಲೀಸರು ಹಾರಿಸಿದ ಗುಂಡು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ದೇಶ ಎದುರಿಸುತ್ತಿರುವ ಬಿಕ್ಕಟ್ಟಿಗೆ ಸಂವಿಧಾನ ತಿದ್ದುಪಡಿ ಮತ್ತು ಅಧ್ಯಕ್ಷೀಯ ವ್ಯವಸ್ಥೆಯ ರದ್ದತಿಯಂತಹ ಕ್ರಮಗಳಿಂದ ಪರಿಹಾರ ಸಿಗುವುದಿಲ್ಲ. ದ್ವೀಪ ರಾಷ್ಟ್ರದ ರಾಜಕೀಯ ಸಂಸ್ಕೃತಿಯಲ್ಲಿ ಬದಲಾವಣೆ ಅಗತ್ಯ
- ಫೀಲ್ಡ್ ಮಾರ್ಷಲ್ ಶರತ್ ಫೊನ್ಸೆಕಾ, ಶ್ರೀಲಂಕಾದ ಮಾಜಿ ಸೇನಾ ಮುಖ್ಯಸ್ಥ