ನ್ಯೂಯಾರ್ಕ್: ಅಫ್ಗಾನಿಸ್ತಾನದ ನೆಲವನ್ನು ಭಯೋತ್ಪಾದನೆಗಾಗಿ ಬಳಸಲು ಬಿಡುವುದಿಲ್ಲ ಎಂದು ತಾಲಿಬಾನಿಗಳು ಹೇಳಿದ್ದು, ತಮ್ಮ ಈ ಬದ್ಧತೆಯನ್ನು ಅವರು ಕಾರ್ಯರೂಪಕ್ಕೆ ತರಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜಿ20ರಾಷ್ಟ್ರಗಳಿಗೆ ತಿಳಿಸಿದರು.
ಹಾಗೆಯೇ, ವಿಶಾಲ ತಳಹದಿ ಮೇಲೆ ಮತ್ತು ಅಫ್ಗಾನಿಸ್ತಾನದ ಎಲ್ಲ ವರ್ಗಗಳ ಪ್ರಾತಿನಿಧ್ಯ ಹೊಂದಿದ ಸರ್ಕಾರ ರಚನೆಯಾಗಬೇಕೆಂದು ವಿಶ್ವ ಸಮುದಾಯ ನಿರೀಕ್ಷಿಸುತ್ತಿದೆ ಎಂದು ಅವರು ತಿಳಿಸಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನದ ಭಾಗವಾಗಿ ಬುಧವಾರ ನಡೆದ ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಅಫ್ಗಾನಿಸ್ತಾನದ ಕುರಿತು ಜೈಶಂಕರ್ ಮಾತನಾಡಿದರು.
‘ಮಾನವೀಯ ಅಗತ್ಯಗಳಿಗೆ ತಕ್ಕಂತೆ ಅಂತರಾಷ್ಟ್ರೀಯ ಸಮುದಾಯವು ಒಟ್ಟಾಗಿ ಪ್ರತಿಕ್ರಿಯಿಸಬೇಕು. ನೆರವು ಒದಗಿಸುವವರಿಗೆ ಯಾವುದೇ ಅಡೆತಡೆಗಳು, ನಿರ್ಬಂಧಗಳನ್ನು ವಿಧಿಸದೇ, ನೇರವಾಗಿ ನೆರವು ನೀಡಲು ಅವಕಾಶ ಕಲ್ಪಿಸಬೇಕು‘ ಎಂದು ವರ್ಚುವಲ್ ಸಭೆಯ ನಂತರ ಜೈಶಂಕರ್ ಸರಣಿ ಟ್ವೀಟ್ ಮಾಡಿದ್ದಾರೆ.