ನ್ಯೂಯಾರ್ಕ್: ನವೆಂಬರ್ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದನ್ನು ಖಾತರಿಪಡಿಸಲು ಡೊನಾಲ್ಡ್ ಟ್ರಂಪ್ ಬುಧವಾರ ನಿರಾಕರಿಸಿದ್ದಾರೆ. ಟ್ರಂಪ್ ಅವರ ಈ ನಡೆ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್ ಅವರಿಂದ ಹಿಡಿದು, ಸ್ವತಃ ತಮ್ಮ ಪಕ್ಷದವರಿಂದಲೇ ಟೀಕೆಗೆ ಗುರಿಯಾಗಿದೆ.
ಬದಲಾವಣೆ ಏನಾದರೂ ಆದರೆ, ಡೆಮಾಕ್ರಟಿಕ್ ಅಭ್ಯರ್ಥಿಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡಲು ತಾವು ಬದ್ಧರಾಗಿದ್ದೀರಾ? ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ ಸರಿ, ಮುಂದೆ ಏನಾಗಲಿದೆ ಎಂಬುದನ್ನು ನಾವು ನೋಡಬೇಕಾಗಿದೆ,’ ಎಂದು ಹೇಳಿದರು.
‘ಮತಪತ್ರಗಳ ಬಗ್ಗೆ ನಾನು ಈ ವರೆಗೆ ಬಹಳ ಬಲವಾಗಿ ಆರೋಪ ಮಾಡುತ್ತಾ ಬಂದಿದ್ದೇನೆ. ಮತಪತ್ರಗಳು ವಿಪತ್ತು ಸೃಷ್ಟಿ ಮಾಡಲಿವೆ. ಒಂದು ವೇಳೆ ಮೇಲ್ ಇನ್ ಮತದಾನವನ್ನು ರದ್ದು ಮಾಡಿದರೆ, ಅಧಿಕಾರ ವರ್ಗಾವಣೆ ಎಂಬುದೇ ಇರುವುದಿಲ್ಲ. ನಾನೇ ಮುಂದುವರಿಯುತ್ತೇನೆ,’ ಎಂದೂ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರ ಸುರಕ್ಷತೆಗಾಗಿ ಅಮೆರಿಕದಲ್ಲಿ ಮೇಲ್–ಇನ್ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದರ ಬಗ್ಗೆ ಟ್ರಂಪ್ ಮೊದಲಿನಿಂದಲೂ ಆಕ್ಷೇಪಿಸುತ್ತಲೇ ಬಂದಿದ್ದಾರೆ. ‘ಇದು ಚುನಾವಣಾ ಅಕ್ರಮಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಟ್ರಂಪ್,’ ಅವರ ಆರೋಪ.
ಇದಕ್ಕೂ ಮೊದಲು ಮಾತನಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ರೂತ್ ಬ್ಯಾಡರ್ ಗಿನ್ಸ್ಬರ್ಗ್ ಅವರಿಂದ ತೆರವಾಗುವ ಸ್ಥಾನಕ್ಕೆ ಶೀಘ್ರವೇ ನ್ಯಾಯಮೂರ್ತಿಯನ್ನು ನೇಮಕ ಮಾಡಬೇಕು. ಯಾಕೆಂದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವಿವಾದವು ಸುಪ್ರೀಂ ಕೋರ್ಟ್ನಲ್ಲೇ ಅಂತ್ಯವಾಗಲಿದೆ. ಒಂದು ವೇಳೆ 9ನೇ ನ್ಯಾಯಮೂರ್ತಿ ಅಧಿಕಾರದಲ್ಲಿ ಇಲ್ಲದೇ ಹೋದರೆ, ಸುಪ್ರೀಂಕೋರ್ಟ್ 4–4 ಆಗಿ ಸಮಾನವಾಗಿ ವಿಭಾಗವಾಗುತ್ತದೆ,’ ಎಂದು ಅವರು ಹೇಳಿದ್ದರು.
President Trump said ‘it’s very important that we have nine justices’ because the 2020 election might end up at the Supreme Court https://t.co/1XnDs2TDyS pic.twitter.com/O6hFzK1IdJ
— Reuters (@Reuters) September 24, 2020
ಟ್ರಂಪ್ ಹೇಳಿಕೆಗೆ ಬೈಡನ್ ಏನಂದರು?
ನವೆಂಬರ್ 3 ರ ಮತದಾನಕ್ಕೆ ಮೊದಲೇಜನಾಭಿಪ್ರಾಯದಲ್ಲಿ ಸ್ಥಿರ ಮುನ್ನಡೆ ಸಾಧಿಸಿರುವ ಜೊ ಬೈಡೆನ್, ಟ್ರಂಪ್ ಅವರ ಸದ್ಯದ ಹೇಳಿಕೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
‘ನಾವು ಯಾವ ದೇಶದಲ್ಲಿದ್ದೇವೆ? ನೋಡಿ, ಅವರು ಅತ್ಯಂತ ತರ್ಕ ರಹಿತ ವಿಷಯಗಳನ್ನು ಹೇಳುತ್ತಾರೆ. ನನಗೆ ಏನು ಹೇಳಬೇಕೆಂದು ಗೊತ್ತಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ವಪಕ್ಷೀಯರ ಟೀಕೆ
ಸ್ವತಃ ಟ್ರಂಪ್ ಪಕ್ಷದವರೇ ಆದ ಮಿಟ್ ರೊಮ್ನಿ, ‘ಟ್ರಂಪ್ ಹೇಳಿಕೆ ಊಹಿಸಲು ಅಸಾಧ್ಯವಾದದ್ದು ಮತ್ತು ಸ್ವೀಕಾರವಲ್ಲದ್ದು. ಶಾಂತಿಯುತ ಅಧಿಕಾರ ಹಸ್ತಾಂತರವು ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ,’ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.