ವಾಷಿಂಗ್ಟನ್: 2002ರಲ್ಲಿ ನಡೆದಿದ್ದ ಡೇನಿಯಲ್ ಪರ್ಲ್ ಅವರ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸುವ ಪಾಕಿಸ್ತಾನ ಸುಪ್ರೀಂ ಕೋರ್ಟ್ ನಿರ್ಧಾರ ಕುರಿತು ಶ್ವೇತಭವನ ಆಕ್ರೋಶ ವ್ಯಕ್ತಪಡಿಸಿದೆ. ಈ ತೀರ್ಮಾನವು ಎಲ್ಲೆಡೆ ಭಯೋತ್ಪಾದನೆಯಿಂದ ನೊಂದವರಿಗೆ ನೋವು ತರುತ್ತದೆ ಎಂದಿದೆ.
ವಾಲ್ ಸ್ಟ್ರೀಟ್ ಜರ್ನಲ್ನ ಸೌತ್ಏಷಿಯಾ ವಿಭಾಗದ ಮುಖ್ಯಸ್ಥರಾಗಿದ್ದ 38 ವರ್ಷದ ಪರ್ಲ್ ಅವರನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಐಎಸ್ಐ ಮತ್ತು ಅಲ್ಖೈದಾ ಉಗ್ರ ಸಂಘಟನೆಯ ನಡುವಿನ ನಂಟಿನ ಕುರಿತು ಇವರು ತನಿಖಾ ವರದಿ ಮಾಡುತ್ತಿದ್ದಾರೆ ಎಂಬುದು ಕೃತ್ಯಕ್ಕೆ ಕಾರಣವಾಗಿತ್ತು.
ಪಾಕಿಸ್ತಾನ ಸುಪ್ರೀಂ ಕೋರ್ಟ್ ಗುರುವಾರ ಪ್ರಕರಣದ ಆರೋಪಿ ಅಲ್ಖೈದಾ ಸಂಘಟನೆಯ ಅಹಮ್ಮದ್ ಒಮರ್ ಸಯೀದ್ ಶೇಖ್ನನ್ನು ಖುಲಾಸೆಗೊಳಿಸಿ, ಬಿಡುಗಡೆಗೆ ಆದೇಶಿಸಿತ್ತು. ಪರ್ಲ್ ಕುಟುಂಬವು ಈ ಆದೇಶ ನ್ಯಾಯಕ್ಕೆ ವಿರುದ್ಧವಾದುದು ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಕಿ ಅವರು, ’ಪಾಕಿಸ್ತಾನದ ಸುಪ್ರೀಂಕೋರ್ಟ್ ಆದೇಶ ಕುರಿತು ಅಸಮಾಧಾನವಿದೆ. ಈ ಆದೇಶ ವಿಶ್ವದ ಅತ್ಮಸಾಕ್ಷಿಯನ್ನೇ ದಿಗ್ಭ್ರಮೆಗೊಳಿಸಿದೆ’ ಎಂದು ಟೀಕಿಸಿದರು.