ಇಸ್ಲಾಮಾಬಾದ್ (ಪಿಟಿಐ): 1947ರಲ್ಲಿ ದೇಶ ವಿಭಜನೆ ವೇಳೆ ನಡೆದ ಹಿಂಸಾಚಾರದಿಂದಾಗಿ ಕುಟುಂಬಸ್ಥರಿಂದ ದೂರವಾಗಿ ಪಾಕಿಸ್ತಾನ ಸೇರಿದ್ದ ಮುಮ್ತಾಜ್ ಬೀಬಿ 75 ವರ್ಷಗಳ ನಂತರ ಭಾರತದಲ್ಲಿರುವ ತಮ್ಮ ಕುಟುಂಬವನ್ನು ಸೇರಿದ್ದಾರೆ. ಸಾಮಾಜಿಕ ಜಾಲತಾಣದ ನೆರವಿನ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಕರ್ತಾರ್ಪುರ ಕಾರಿಡಾರ್ನಲ್ಲಿಮುಮ್ತಾಜ್ ತಮ್ಮ ಸಹೋದರರನ್ನು ಭೇಟಿ ಮಾಡಿದ್ದಾರೆಎಂದು ಮಾಧ್ಯಮವೊಂದು ವರದಿ ಮಾಡಿದೆ.
ದೇಶ ವಿಭಜನೆ ವೇಳೆ ನಡೆದ ಹಿಂಸಾಚಾರದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ತಾಯಿಯ ಶವದ ಮೇಲೆ ಮಲಗಿದ್ದ ಹಸುಗೂಸನ್ನು ಮೊಹಮ್ಮದ್ ಇಕ್ಬಾಲ್ ಮತ್ತು ಅಲ್ಲಾ ರಾಖಿ ಎಂಬುವರು ದತ್ತು ಪಡೆದು ಮುಮ್ತಾಜ್ ಬೀಬಿ ಎಂದು ಹೆಸರಿಟ್ಟಿದ್ದರು. ಬಳಿಕ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವಾರಿಕಾ ಟಿಯಾನ್ ಗ್ರಾಮದಲ್ಲಿ ನೆಲೆಸಿದ್ದರು. ಮುಮ್ತಾಜ್ ಅವರನ್ನು ತಮ್ಮದೇ ಮಗು ಎಂಬಂತೆ ಸಾಕಿದ್ದರು. ಆದರೆ, ಇಕ್ಬಾಲ್ ತಮ್ಮ ಕೊನೆಗಾಲದಲ್ಲಿ ಮುಮ್ತಾಜ್ ಜನ್ಮ ರಹಸ್ಯ ತಿಳಿಸಿ ಮೃತಪಟ್ಟಿದ್ದರು.
ಹುಟ್ಟಿದ ಊರು ಮತ್ತು ತಂದೆಯ ಹೆಸರು ಮಾತ್ರ ತಿಳಿದಿದ್ದಮುಮ್ತಾಜ್, ಸಾಮಾಜಿಕ ಜಾಲತಾಣದ ಮೂಲಕ ನಿರಂತರವಾಗಿ ಪ್ರಯತ್ನಿಸಿ ಕೊನೆಗೂ ತಮ್ಮ ಕುಟುಂಬಸ್ಥರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ತಾರ್ಪುರ ಕಾರಿಡಾರ್ನ ಗುರುದ್ವಾರದಲ್ಲಿ ಮುಮ್ತಾಜ್ ತಮ್ಮ ಸಹೋದರರನ್ನು ಭೇಟಿ ಮಾಡಿಪರಸ್ಪರ ಮಾತುಕತೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.