ನವದೆಹಲಿ: ಹಾರ್ಕಿವ್ ಸೇರಿದಂತೆ ಪೂರ್ವ ಉಕ್ರೇನ್ನ ವಿವಿಧೆಡೆ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಕುರಿತಂತೆ ಭಾರತೀಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ರಷ್ಯಾ ತಿಳಿಸಿದೆ.
ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರನ್ನು ರಷ್ಯಾ ದೇಶದ ಮೂಲಕ ಸ್ಥಳಾಂತರ ಮಾಡುವಂತೆ ಭಾರತ ಮಾಡಿರುವ ಮನವಿಯನ್ನು ನಾವು ಸ್ವೀಕರಿಸಿದ್ದೇವೆ ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ್ ಹೇಳಿದ್ದಾರೆ.
ಹಾರ್ಕಿವ್, ಸುಮಿ ಮತ್ತು ಇತರೆಡೆ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಹೊರಗೆ ಕರೆತರುವ ದೃಷ್ಟಿಯಿಂದ ರಷ್ಯಾದ ಮೂಲಕ ‘ಮಾನವೀಯ ಕಾರಿಡಾರ್’ನಿರ್ಮಾಣಕ್ಕೆ ಗಂಭೀರ ಯತ್ನ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯುದ್ಧ ನಡೆಯುತ್ತಿರುವ ಉಕ್ರೇನ್ನ ವಿವಿಧೆಡೆ ಸಿಲುಕಿರುವ ಭಾರತೀಯರ ರಕ್ಷಣೆಗೆ ಆದಷ್ಟು ಬೇಗ ಸುರಕ್ಷಿತ ರಕ್ಷಣಾ ಕಾರಿಡಾರ್ ನಿರ್ಮಾಣಕ್ಕೆ ತೀವ್ರ ಪ್ರಯತ್ನ ನಡೆಸುತ್ತಿದ್ದೇವೆ’ಎಂದು ಹೇಳಿದರು.
ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳು ಭಾರತಕ್ಕೆ ‘ಎಸ್–400’ಕ್ಷಿಪಣಿ ವ್ಯವಸ್ಥೆ ಸರಬರಾಜು ಮಾಡುವುದಕ್ಕೆ ಯಾವುದೇ ತೊಡಕಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ಧಾರೆ.
ಉಕ್ರೇನ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತವು ಪಕ್ಷಪಾತ ರಹಿತವಾದ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದರು.