ಕಾಲೇಜಿನ ಮೊದಲನೇ ದಿನ, ಬಾನಿನ ಸೀನಿಗೆ ಭುವಿಯು ನೆನೆಯುತ್ತಿತ್ತು.ಅದೇನೋ ಅಪರಿಚಿತ ಭಾವ ಭರಿಸಿ ಮೆಟ್ಟಿಲು ಹತ್ತುವಾಗ ಕಂಡಿದ್ದೆ ಅವಳು. ಸುರದ್ರೂಪಿ ಏನಲ್ಲ ಆದ್ರು ಲಕ್ಷಣವಾಗಿದ್ದಳು. ಒಂದೆಡೆ ವೇಲಿನ ರಗಳೆಯಾದರೆ , ಇನ್ನೊಂಡೆ ದೀಪದಂತ ಕಣ್ಣುಗಳಿಗೆ ಮುಂಗುರುಳು ರಗಳೆ ನೀಡುತ್ತಿತ್ತು. ಮುಂಗುರುಳು ಮರೆಗೆ ಸರಿಸಿ ಗಮನಿಸದೆ ಹೊರಟೇ ಹೋದಳು. ಮಿನುಗೊ ನಕ್ಷತ್ರವೆಂದು ನಾನು ಸುಮ್ಮನಾದೆ. ಮುಂದೊಂದು ಅಚ್ಚರಿ ಕಾದಿತ್ತು.ಅವಳನ್ನು ನನ್ನ ತರಗತಿಯಲ್ಲೇ ಕಂಡೆ. ಮುಂದೆ ಮೋಡ ಕವಿದಿತ್ತು ಅನ್ಸತ್ತೆ ಒಂದು ವಾರ ನಕ್ಷತ್ರ ಕಾಣಲೇ ಇಲ್ಲ. ಮತ್ತೊಮ್ಮೆ ಅವಳನ್ನು ಕಂಡಿದ್ದು ಲ್ಯಾಬ್ನಲ್ಲಿ, ಕ್ರಮಸಂಖ್ಯೆಯ ಕೈಚಳಕದಿಂದ ಅವಳು ನನ್ನ ಪಕ್ಕದಲ್ಲೇ ಕೂತಳು.
ಕಾಲ ಕಳೆದಂತೆ ಮಾತು ಬೆಳೆಯಿತು. ನೋಟ ಚಿಗುರಲು ಆರಂಭಿಸಿತು. ನೋಡ ನೋಡುತ್ತಿದ್ದಂತೆ ಹೃದಯದಿ ಹೂ ಅರಳಿತು. ಲ್ಯಾಬ್ ನಡುವಲ್ಲಿ, ಪಾಠ ನಡೆವಾಗ, ಎದುರು ಬದುರು ನಿಂತಾಗ ನೋಟಗಳ ಬದಲಾವಣೆ, ನಗು, ಕೀಟಲೆ, ಕಾಳಜಿಯೆಲ್ಲಾ ಜೋರಾಗಿತ್ತು.
ಅವಳ ದೀಪದಂತೆ ಹೊಯ್ದಾಡುವಂತ ಕಣ್ಗಳು, ಮುಂಗೋಪ ಮಸೆದ ಮೊನಚು ಮೂಗು, ಕೆನ್ನೆ ಮೇಲೆ ಬ್ರಹ್ಮ ನಿಟ್ಟ ದೃಷ್ಟಿ ಬೊಟ್ಟು, ನೀಳ ಕೇಶ ರಾಶಿ, ಗುಲಾಬಿ ಹೂವಿನ ಎಸಳಿನಂತ ತುಟಿ ಎದೆ ಒಳಗೆ ಅಚ್ಚಾಗಿ, ಕನಸಿಗೂ ಅವಳನ್ನು ಕರೆತರಲು ಕರಗತವಾಗಿತ್ತು. ಹೀಗೆ, ಮೂರು ತಿಂಗಳು ಸರಿದ ಮೇಲೆ ಅವಳ ಗೆಳತಿ ಮೂಲಕ "ಅವ್ಳು ನಿನ್ನ ಇಷ್ಟ ಪಡ್ತಿದಾಳೆ" ಎಂಬ ಮಾತು ಕೇಳಿದಾಗ ಮನದ ಮೂಲೆಯಲ್ಲೆಲ್ಲೋ ಹಿಂಜರಿಕೆ, ಭವಿಷ್ಯದ ಬಗ್ಗೆ ಧೃತಿಗೆಟ್ಟು "ನಂಗೇನು ಹಾಗಿಲ್ಲ, ಒಳ್ಳೆ ಫ್ರೆಂಡ್ ಆಗ್ತಾಳೆ ಅನ್ಕೊಂಡಿದ್ದೆ" ಎಂದು ಅಂದೇ ಬಿಟ್ಟೆ. ಮುಂದೆ ಬರೀ ಮೌನ, ಮುನಿಸಿನಂತೆ ನಟಿಸಿ ಅವಳ ಕದ್ದು ನೋಡೋದೆ ಬಲು ಕಷ್ಟವಾಗಿತ್ತು. ಆ ವರ್ಷ ಮುಗಿಯಿತು. ಇಬ್ಬರು ಒಳ್ಳೆ ಅಂಕದೊಂದಿಗೆ ಪಾಸ್ ಆದ್ವಿ. ಕೊನೆ ವರ್ಷದಲ್ಲಿ ಕೇವಲ ಟ್ಯುಟೋರಿಯಲ್ಲೇ ಕಾರುಬಾರು, ನಾ ಸೇರಿದಲ್ಲೇ ಅವಳು ಬಂದು ಸೇರ್ಕೊಂಡ್ಳು. ಮನಸ್ಸಿನಲ್ಲಿ ಖುಷಿಯಿತ್ತು ಆದರೆ ಮುಖದಲ್ಲಿ ತೋರಿಸುವಂತಿರಲಿಲ್ಲ. ಅವಳ ಪ್ರೀತಿ ಕಂಡು ಖುಷಿಯಾದರು, ನಾ ದೂರವಿಟ್ಟಿದ್ದು ಇಬ್ಬರಿಗಾಗಿಯೂ. ಅದಕ್ಕೆ ಕಳಂಕ ತರಲು ನನಗೂ ಇಷ್ಟ ಇರಲಿಲ್ಲ. ವರ್ಷ ಕೊನೆಯಲ್ಲಿ ನಾನೇ ನಿವೇದಿಸಲು ನಿಶ್ಚಯಿಸಿ ಹೋದೆ, ಆದರೆ ಧೈರ್ಯ ಸಾಲದೆ ಅಂದು ಬರೆದಿಟ್ಟ ಕವಿತೆ ಇಂದಿಗೂ ಜೊತೆಗಿದೆ.
'ಮನದ ಮೂಲೆಲ್ಲಿ ಮೌನದ ಮೆರವಣಿಗೆ
ಹೃದಯ ಬಡಿತವೇ ಧೋಲು ಅರೆಗಳಿಗೆ.'
ಪೂರ್ವ ತಯಾರಿ ಪರೀಕ್ಷೆಗಳೆಲ್ಲ ಕಳೆದು ಮೂಲ ಪರೀಕ್ಷೆ ಬಂದಿತ್ತು. ಕೊನೆಯ ಪರೀಕ್ಷೆ ಅವಳಿಗೆ ಹೇಳಲು ಕೊನೆಯ ಅವಕಾಶವಾಗಿತ್ತು. ಪರೀಕ್ಷೆ ಮುಗಿದ ಮೇಲೆಪ್ರಶ್ನೆ ಪತ್ರಿಕೆಯ ಹಿಂದೆ ನಂಬರ್ ಬರೆದು ಮನಸ್ಸು ಹೇಳಿದ ಕವಿತೆಯ ಗೀಜಿದೆ.ಬುದ್ಧಿಗೆ ಇನ್ನು ಅದರ ಅರ್ಥವೆ ಗೊತ್ತಾಗಿಲ್ಲ.
'ಹೆಸರಿದ ಬೇಕೇ ಹುಟ್ಟಿದ ಪ್ರೀತಿಗೆ
ಎರಡುಸಿರ ಗಾಳಿಯಲ್ಲಿ ಸ್ವಛಂದವಾಗಿ ಹಾರಲಿ.
ಹೆಸರಿದೆ ಉಸಿರಾಡೋ ಪ್ರಾಣಿಗಳಂತೆ ನಲಿದಾಡಲಿ.
*ಆದರೆ ಅವಳಿಗದು ಅರ್ಥ ಆಗಿತ್ತು*
-ನಿಧೀಶ್ ಕೆ ಶೆಟ್ಟಿಗಾರ್, ಉಡುಪಿ
***
ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್ ಇಕೋ ಡಾಟ್‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.