ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಇಪಿ ಆಯೋಗದ ಮಧ್ಯಂತರ ವರದಿ ಜಾರಿಗೆ ಆದೇಶ: ಪ್ರಸಕ್ತ ಸಾಲಿನಿಂದ 3 ವರ್ಷ ಪದವಿ

ಈಗಾಗಲೇ ಪ್ರವೇಶ ಪಡೆದವರಿಗಷ್ಟೇ ಆನರ್ಸ್‌ ಪದವಿ: ಉನ್ನತ ಶಿಕ್ಷಣ ಇಲಾಖೆ
Published 9 ಮೇ 2024, 0:30 IST
Last Updated 9 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಸಿನಂತೆ 2024–25ನೇ ಸಾಲಿನಿಂದ ನಾಲ್ಕು ವರ್ಷಗಳ ಪದವಿ ರದ್ದು ಮಾಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ–2020 ರಾಜ್ಯದಲ್ಲಿ ಅನುಷ್ಠಾನಗೊಂಡ ನಂತರ ಪದವಿ ತರಗತಿಗಳಿಗೆ ಪ್ರವೇಶ ಪಡೆದು ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ನಾಲ್ಕು ವರ್ಷಗಳ ಆನರ್ಸ್‌ ಪದವಿಗೆ ಪ್ರವೇಶ ಪಡೆಯಬಹುದು.  ವಿದ್ಯಾರ್ಥಿಗಳ ಬೇಡಿಕೆ, ಕಾಲೇಜುಗಳ ಮೂಲಸೌಕರ್ಯಗಳನ್ನು ಪರಿಗಣಿಸಿ, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನಾಲ್ಕನೇ ವರ್ಷದ ಪದವಿಗೆ ಅಗತ್ಯವಾದ ಸೂಕ್ತ ಕಾಲೇಜು ಅಥವಾ ಕೇಂದ್ರಗಳನ್ನು ವಿಶ್ವವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ಕೋರ್ಸ್‌ ಲಭ್ಯವಿಲ್ಲದಿದ್ದರೆ ಸಮೀಪದ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದು ಸೂಚಿಸಲಾಗಿದೆ.

2021–22ನೇ ಸಾಲಿನಿಂದ 2023–24ರವರೆಗೆ ಪ್ರವೇಶ ಪಡೆದವರು ನಾಲ್ಕು ವರ್ಷಗಳ ಆನರ್ಸ್‌ ಪದವಿ ಪಡೆದರೆ ಅಂಥವರು ಒಂದು ವರ್ಷದ ಏಕೀಕೃತ ಸ್ನಾತಕೋತ್ತರ ಪದವಿ ಮಾಡಬಹುದು. ಮೂರು ವರ್ಷದ ಪದವಿಗೆ ನಿರ್ಗಮಿಸಲು ಬಯಸುವವರು ಹಿಂದಿನಂತೆ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು. 

2021–22ನೇ ಸಾಲಿಗಿಂತ ಹಿಂದೆ ಇದ್ದ ರೀತಿಯೇ 2024–25ನೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ನಿಯಮಗಳು ಇರಲಿವೆ. ಮೂರು ವಿಷಯಗಳ ಸಂಯೋಜನೆಯನ್ನೇ ಮುಂದುವರಿಸಲಾಗುತ್ತಿದೆ (ಉದಾ: ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸಂಯೋಜನೆ ಇತ್ಯಾದಿ). 5 ಮತ್ತು 6ನೇ ಸೆಮಿಸ್ಟರ್‌ನಲ್ಲಿ ಒಂದು ವಿಷಯದಲ್ಲಿ ಪ್ರಾವೀಣ್ಯ ಪಡೆಯಲು ಅವಕಾಶ ನೀಡಲಾಗಿದೆ. ಪದವಿ ಹಂತದ ಪಠ್ಯಕ್ರಮ ರೂಪಿಸುವ ಹೊಣೆಗಾರಿಕೆಯನ್ನು ಹಿಂದೆ ಇದ್ದಂತೆ ಆಯಾ ವಿಶ್ವವಿದ್ಯಾಲಯಗಳ ವಿಷಯವಾರು ಅಧ್ಯಯನ ಮಂಡಳಿಗಳಿಗೆ ನೀಡಲಾಗಿದೆ. ವಿಷಯವಾರು ಸಂಯೋಜನೆ, ಪ್ರವೇಶ ಪ್ರಕ್ರಿಯೆ ಮಾಹಿತಿಯನ್ನು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ಯುಯುಸಿಎಂಎಸ್‌ ತಂತ್ರಾಂಶದ ಮೂಲಕ ಪಡೆಯಬಹುದು.

2024–25ನೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಪದವಿ ರದ್ದು ಮಾಡಿದ್ದರೂ, ಮಧ್ಯಂತರದಲ್ಲೇ ಪದವಿ ತೊರೆದರೆ ಅವರು ವ್ಯಾಸಂಗ ಮಾಡಿದ ವರ್ಷಗಳ ಲೆಕ್ಕದಲ್ಲಿ ಕೋರ್ಸ್‌ ಪ್ರಮಾಣಪತ್ರ, ಡಿ‍ಪ್ಲೊಮಾ, ಪದವಿ ನೀಡುವ ಬಹು ಪ್ರವೇಶ–ನಿರ್ಗಮನ ಪದ್ಧತಿಯನ್ನು ರದ್ದು ಮಾಡಿಲ್ಲ. ಆಯೋಗ ಅಂತಿಮ ವರದಿ ಸಲ್ಲಿಸಿದ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಉನ್ನತ ಶಿಕ್ಷಣ ಇಲಾಖೆ ಹೇಳಿದೆ. 

ಸಿಇಟಿ: ಆ‌ರ್‌ಡಿ ಸಂಖ್ಯೆ ತಿದ್ದುಪಡಿಗೆ ಅವಕಾಶ

ಬೆಂಗಳೂರು: ಸಿಇಟಿ-2024ರ ಆನ್‌ಲೈನ್‌ ಅರ್ಜಿಯಲ್ಲಿ ಕಂದಾಯ ದಾಖಲೆ (ಆ‌ರ್‌ಡಿ) ಸಂಖ್ಯೆ ಹಾಗೂ ಇನ್ನಿತರ ಕ್ಲೇಮುಗಳ ತಿದ್ದುಪಡಿಗೆ ಮೇ 9ರ ಬೆಳಿಗ್ಗೆ 11ರಿಂದ ಮೇ 15ರ ರಾತ್ರಿ 11.59 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ.

ಅರ್ಹತಾ ಕಂಡಿಕೆ, ಪ್ರವರ್ಗ ಮೀಸಲಾತಿ, ವಾರ್ಷಿಕ ಆದಾಯ, ಹೈದರಾಬಾದ್ ಕರ್ನಾಟಕ ಮೀಸಲಾತಿ 371(ಜೆ), ಕನ್ನಡ ಮಾಧ್ಯಮ, ಗ್ರಾಮೀಣ ಮಾಧ್ಯಮ, ವಿಶೇಷ ಪ್ರವರ್ಗಕ್ಕೆ ಸೇರಿದಂತೆ ತಾವು ಸಲ್ಲಿಸಿರುವ ಅರ್ಜಿಯಲ್ಲಿ ಮಾಡಿರುವ ಕ್ಲೇಮುಗಳನ್ನು ಅಭ್ಯರ್ಥಿಗಳು ಪರಿಶೀಲಿಸಿ, ಅಗತ್ಯವಿ ದ್ದರೆ ತಿದ್ದುಪಡಿ ಮಾಡಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹೇಳಿದೆ.

ಅಭ್ಯರ್ಥಿಗಳು ಎಚ್ಚರದಿಂದ ಸರಿಯಾದ ಆರ್‌ಡಿ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಯಲ್ಲಿ ದಾಖಲಿಸಬೇಕು. ಆರ್‌ಡಿ ಸಂಬಂಧಿತ ಎಲ್ಲಾ ಪ್ರಮಾಣ ಪತ್ರಗಳಿಗೆ ಇದು ಅನ್ವಯಿಸಲಿದ್ದು, ಆರ್‌ಡಿ ಸಂಖ್ಯೆ ತಾಳೆಯಾಗದಿದ್ದಲ್ಲಿ, ಸಂಬಂಧಿಸಿದ ಮೀಸಲಾತಿಯ ಅರ್ಹತೆ ಲಭ್ಯವಾಗುವುದಿಲ್ಲ. ವೈದ್ಯಕೀಯ, ದಂತ ವೈದ್ಯಕೀಯ ಪ್ರವೇಶಾತಿಗೆ ಅನ್ವಯಿಸುವಂತೆ ಅಲ್ಪಸಂಖ್ಯಾತ ಮೀಸಲಾತಿಗಳನ್ನೂ ಸಹ ಕ್ಲೇಮ್ ಮಾಡಬಹುದು ಎಂದು ಹೇಳಿದೆ.

ಜೂನ್‌ 1ರಿಂದ ಪದವಿ ಪೂರ್ವ ಕಾಲೇಜುಗಳು ಆರಂಭ

ಬೆಂಗಳೂರು: ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳು ಜೂನ್‌ 1ರಿಂದ ಆರಂಭವಾಗಲಿದ್ದು, ಮೇ 13ರಿಂದ ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆಗಳು ನಡೆಯಲಿವೆ.

ಅಕ್ಟೋಬರ್‌ 2ರಿಂದ ಅ. 18ರವರೆಗೆ ದಸರಾ ರಜೆ ಇದ್ದು, ಅ.19ರಿಂದ ಮಾರ್ಚ್‌ 31ರವರೆಗೆ (2025) ಎರಡನೆ ಅವಧಿಯ ತರಗತಿಗಳು ನಡೆಯಲಿವೆ. ಏ.1ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. ದಂಡ ಶುಲ್ಕವಿಲ್ಲದೇ ಜೂನ್‌ 14ರ ಒಳಗೆ ಪ್ರವೇಶ ಪಡೆಯಬಹುದು. ದ್ವಿತೀಯ ಪಿಯು ಸೇರಿದಂತೆ ಜೂನ್‌ 29ರ ಒಳಗೆ ಎಲ್ಲ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

ಪ್ರವೇಶ ಶುಲ್ಕಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಇದ್ದಂತೆ ಮುಂದುವರಿ ಯಲಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಮಾರ್ಗಸೂಚಿಯಂತೆ ಎಲ್ಲ ಕಾಲೇಜುಗಳು ಮೀಸಲಾತಿ ಅನ್ವಯ ಮೆರಿಟ್‌ ಆಧಾರದಲ್ಲಿ ವಿದ್ಯಾರ್ಥಿ
ಗಳಿಗೆ ಪ್ರವೇಶ ನೀಡಬೇಕು ಎಂದು ಪಿಯು ನಿರ್ದೇಶನಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT