ಭೋಪಾಲ್: ಅಪ್ರಾಪ್ತ ವಯಸ್ಸಿನ ಪುತ್ರನನ್ನು ಮತಗಟ್ಟೆ ಕರೆದುಕೊಂಡು ಹೋಗಿ ಇವಿಎಂನಲ್ಲಿ ಬಟನ್ ಒತ್ತಲು ಅವಕಾಶ ನೀಡಿ, ಅದನ್ನು ವಿಡಿಯೊ ಮಾಡಿದ ಆರೋಪದ ಮೇಲೆ ಭೋಪಾಲ್ನ ಬಿಜೆಪಿ ನಾಯಕ, ಜಿಲ್ಲಾ ಪಂಚಾಯತ್ ಸದಸ್ಯ ವಿಜಯ್ ಮೇಹರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಖಿತ್ವಾಸ್ ಗ್ರಾಮದ ಮತಗಟ್ಟೆಯ ಚುನಾವಣಾ ಅಧಿಕಾರಿ ಸಂದೀಪ್ ಸೈನಿ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಕುಶಾಲೇಂದ್ರ ವಿಕ್ರಮ್ ಸಿಂಗ್ ಆದೇಶಿಸಿದ್ದಾರೆ. ಮೇಹರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
‘ಮೇ 7ರಂದು ನಡೆದ ಚುನಾವಣೆಯಲ್ಲಿ ಘಟನೆ ನಡೆದಿದೆ. ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗಿದೆ’ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.