ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಸತ್ಯಮಾರ್ಗ

Published 7 ಮೇ 2024, 0:27 IST
Last Updated 7 ಮೇ 2024, 0:27 IST
ಅಕ್ಷರ ಗಾತ್ರ

ಸತ್ಯಮ್ಮ, ಸುಳ್ಳವ್ವ ಮಾತಾಡಿಕ್ಯತಿದ್ರು. ಸತ್ಯಾನೇ ಹೇಳಬಕು ಅಂತ ಸತ್ಯವ್ವ ಅಂದ್ರೆ ಸುಳ್ಳೇಳದಿದ್ರೆ ಬದುಕು ನಡೆದದಾ ಅಂತಿದ್ಲು ಸುಳ್ಳವ್ವ.

‘ನೋಡೇ ನನ್ನವ್ವ, ಅದೇನೋ ದೌರ್ಜನ್ಯ ಮಾಡ್ಯವರೆ ಅಂತ ತೆನೆಯೋರನ್ನ ಅರೆಸ್ಟ್ ಮಾಡ್ಯವುರಂತೆ. ಯಾರದು ಡೌ-ರ್ಜನ್ಯವೋ ಯಾರು ಇಕಮದ್ದಾಕ್ಯವರೋ ಏನೋ ನಾನು ಕಾಣೆ’ ಅಂದಳು ಸತ್ಯಮ್ಮ.

‘ಅಕ್ಕೋ ಒಂದು ತಿಳಕಾ, ಪಕ್ಸ ಕಟ್ಟತಾ ಕಟ್ಟತಾ ಸಂಬಂಧಿಗಳು ಅವಕಾಶ ಸಿಕ್ತಾಸಿಕ್ತಾ ದಾಯಾದಿಗಳಾಯ್ತರೆ ಕನೆ’ ಅಂತ ಮೂತಿ ತಿವಿದಳು ಸುಳ್ಳವ್ವ.

‘ಅಯ್ಯೋ ನನತಾಯಿ, ಕೋವಿಡ್ ಚುಚ್ಚುಮದ್ದು ತಕ್ಕಂದೋರು ಯಾಕ್ಯಾಕೋ ಸಾಯ್ತಾವ್ರಂತೆ. ಇಕ್ಕಡೆ ವೋಟು ಖರೀದಿ ಮಾಡಕ್ಕೆ ಕಾಸು ಸಾಗಿಸ್ತಲೇ ಅವ್ರೆ. ಯಾವುದು ಸತ್ಯವೋ ಯಾವುದು ಬದ್ದೋ ಒಂದೂ ತಿಳೀತಿಲ್ಲ’ ಸತ್ಯಮ್ಮ ಕೊರಗಿದಳು.

‘ಅಲ್ಲ ಕವ್ವ, ಪಕ್ಸಗಳು ಚುನಾವಣೆ ಟೇಮಿಗೆ ಅಂತ್ಲೇ ಸುಳ್ಳು-ಜೊಳ್ಳೆಲ್ಲ ಸೇರಿಸಿ ಬೇಕಾದ ಅಳತೆಗೆ ಕತ್ತರಿಸಿಗ್ಯಂದು ತಲೆಗಂಡು ಹಾಕಿ ಮಡಿಕಂದಿರತರೆ, ನಿನಗೆ ತಿಳೀದಾ?’ ಸುಳ್ಳವ್ವ ಗುನ್ನಂಪಟ್ಟೆ ತೋರಿಸಿದಳು.

‘ಇಡೀ ದೇಸಕ್ಕೆ ಒಂದೇ ಪಕ್ಸ, ಒಂದೇ ಸರ್ಕಾರ, ಒಂದೇ ಎಲೆಕ್ಷನ್ ಇರಬಕು ಅಂತಿರದು ಸತ್ಯವೇನೆ?’ ಅಂತ ಯೋಚನೆಗೆ ಬಿದ್ದ ಸತ್ಯಮ್ಮ ಸತ್ಯ-ಸುಳ್ಳಿನ ಮಧ್ಯೆ ಕಳೆದೋದಳು.

‘ಯಕ್ಕೋ ನಿನಗೂ ವಯಸ್ಸಾಯ್ತಾ ಬುದ್ಧಿ ವೀಕಾಯ್ತಾ ಅದೆ. ಇವೆಲ್ಲಾ ಸಮೇವ್ಕೆ ಒಂದು ಮಾತು ಅಷ್ಟೀಯೆ. ರಾಜಕೀಯದವು ವೈಟ್ ಲೈ ಅಂದ್ರೆ ಬಿಳೀಸುಳ್ಳಿನ ಗಮಲದೆಣ್ಣೆ ತಕ್ಕಂದು ಜನದ ತಲೆಗೆ ತಿಕ್ಕಿ ಕಮಂಗಿ ಮಾಡ್ತರೆ ಆಟೇಯ’ ಸುಳ್ಳವ್ವ ಸತ್ಯ ನುಡಿದಿದ್ದಳು!

‘ಸರಿ ಕಾ ಬುಡು ಸುಳ್ಳವ್ವ, ನಿಂದೇ ಕಾರುಬಾರು ನಡೀತಾ ಅದೆ. ಜನ ಮಳಿಲ್ಲ ಬೆಳಿಲ್ಲ ಅಂತ ಕೊರಗತಿದ್ರೆ ರಾಜಕೀಯದವು ಕ್ಯಾಮೆ ಬುಟ್ಟು ಸುಳ್ಳಿನ ಓಕಳಿ ಇಟ್ಟಾಡಿಸಿಕ್ಯಂದು ಅಕ್ಸಲ ಆಡ್ತಾವೆ. ನನ್ನ ಕಾಲ ಮುಗೀತು ಕವ್ವಾ, ನಾನು ಹೋಯ್ತಿನಿ’ ಅಂದ ಸತ್ಯಮ್ಮ ಕಡೆದು ಹೊಂಟೋದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT