ದಾವಣಗೆರೆ: ಮುಂಬರುವ ಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ಕೆನಡಾ ತಂಡದಲ್ಲಿ ದಾವಣಗೆರೆ ಮೂಲದ ಶ್ರೇಯಸ್ ಮೊವ್ವ ಸ್ಥಾನ ಪಡೆದಿದ್ದಾರೆ.
ದಾವಣಗೆರೆಯಲ್ಲಿ ಹುಟ್ಟಿ ಬೆಳೆದಿರುವ ಶ್ರೇಯಸ್, ಎಂ.ಜಿ.ವಾಸುದೇವ ರೆಡ್ಡಿ ಹಾಗೂ ನಿವೃತ್ತ ಶಿಕ್ಷಕಿ ಎನ್.ಯಶೋದಾ ಅವರ ಮಗ. ಇವರು ಇಲ್ಲಿನ ವೀನಸ್ ಕ್ರಿಕೆಟ್ ಕ್ಲಬ್ನಲ್ಲಿ ಆರಂಭದಿಂದಲೂ ತರಬೇತಿ ಪಡೆದಿದ್ದರು.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಶ್ರೇಯಸ್, ಕಾಲೇಜು ದಿನಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂಡದಲ್ಲೂ ಆಡಿದ್ದರು.
2019–20ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ ರೀಜನಲ್ ಸೂಪರ್–50 ಕ್ರಿಕೆಟ್ ಟೂರ್ನಿಯಲ್ಲಿ ಕೆನಡಾ ತಂಡದ ಉಪ ನಾಯಕರಾಗಿದ್ದರು. ದಾವಣ ಗೆರೆಯ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು ಸದ್ಯ ಟೊರೆಂಟೊದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
‘ಎಳವೆಯಿಂದಲೂ ಶ್ರೇಯಸ್ಗೆ ಕ್ರಿಕೆಟ್ನಲ್ಲಿ ಆಸಕ್ತಿ ಇತ್ತು. ಆಟದ ಜೊತೆಗೆ ಓದಿನಲ್ಲೂ ಮುಂದಿದ್ದ. ಆತ ಕೆನಡಾ ತಂಡದಲ್ಲಿ ಸ್ಥಾನ ಪಡೆದಿರುವುದು ಖುಷಿ ನೀಡಿದೆ. ಮಗನನ್ನು ಆಲ್ರೌಂಡರ್ ಮಾಡಬೇಕೆಂಬ ಆಸೆ ಇತ್ತು. ಆತನಿಗೆ ಮೊದಲು ತರಬೇತಿ ನೀಡಿದ್ದ ನಾಗರಾಜ್ ಅವರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ರೂಪಿಸಿದರು’ ಎಂದು ವಾಸುದೇವ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶ್ರೇಯಸ್ಗೆ ಕ್ರಿಕೆಟ್ ಬಗ್ಗೆ ಬದ್ಧತೆ ಇದೆ. ನಮ್ಮ ಕ್ಲಬ್ನಲ್ಲಿ ತರಬೇತಿ ಪಡೆದ ವನು ಎಂಬುದು ಹೆಮ್ಮೆಯ ವಿಚಾರ. ಕ್ಲಬ್ನ ಅಧ್ಯಕ್ಷ ಎಸ್.ಎಸ್.ಬಕ್ಕೇಶ್ ಆತನಿಗೆ ಸಹಕಾರ ನೀಡಿದ್ದಾರೆ’ ಎಂದು ಕೆಎಸ್ಸಿಎ ತುಮಕೂರು ವಲಯದ ಸಂಚಾಲಕ ಕೆ.ಶಶಿಧರ ಹೇಳಿದರು.