ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿರಡಳ್ಳಿ ಗ್ರಾಮದ ಮೋಹನ ಅವರಿಗೆ 10 ಎಕರೆ ಭತ್ತದ ಗದ್ದೆಯಿದೆ. ವರ್ಷದಲ್ಲಿ ಎರಡು ಬಾರಿ ಭತ್ತ ಬೆಳೆವ ಇವರಿಗೆ ಗದ್ದೆ ಮಾಡುವುದು ಎಂದೂ ಕಷ್ಟವೆನಿಸಿಲ್ಲ.
ಮಳೆಗಾಲದ ಬೆಳೆಯಾಗಿ ಗಂಧಸಾಲೆ ಮತ್ತು ತುಂಗಾ ತಳಿ ಬೆಳೆದಿದ್ದರು. ಬೇಸಿಗೆ ಭತ್ತವಾಗಿ ಕೃಷಿ ಇಲಾಖೆ ಒದಗಿಸಿದ ಅಧಿಕ ಇಳುವರಿಯ ತಳಿಯ ಬೆಳೆ ಬೆಳೆಯಲು ಇವರಿಗೆ, ಎಕರೆಯೊಂದಕ್ಕೆ ಕಟಾವಿನ ಖರ್ಚು ಸೇರಿ ಆದದ್ದು ಕೇವಲ 126 ರೂಪಾಯಿಗಳು.
ಮೋಹನ್ ಅವರ ಲೆಕ್ಕಾಚಾರದಂತೆ ಬೇಸಿಗೆ ಭತ್ತ ಅಥವಾ ಕೋಡೆ ಗದ್ದೆ ಕೊಯ್ಲು ಮಾಡಲು ಎರಡೂವರೆ ಎಕರೆಗೆ 25 ಜನ ಬೇಕು. ₹300 ಸಂಬಳದ ಜೊತೆಗೆ ಊಟವೂ ಸೇರಿದಂತೆ ಏಳೂವರೆ ಸಾವಿರದಷ್ಟು ಖರ್ಚಾಗುತ್ತದೆ. ಈ ಕಟಾವು ಯಂತ್ರ 3 ಗಂಟೆಗೆ ಎರಡೂವರೆ ಎಕರೆ ಗದ್ದೆಯನ್ನು 2 ಲೀಟರ್ ಪೆಟ್ರೋಲ್ಗೆ ಕತ್ತರಿಸುತ್ತದೆ. ಈ ಯಂತ್ರದ ಬೆಲೆ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ.
ಇವರಿಗೆ ಐವತ್ತು ಸಾವಿರ ಸಹಾಯಧನ ಕೃಷಿ ಇಲಾಖೆಯಿಂದ ದೊರೆತಿದೆ. ಮೂರು ವರ್ಷದಿಂದ ರಿಪೇರಿಗೆ ಬಂದಿಲ್ಲ. ಮೊದಲ ವರ್ಷವೇ ಬಾಡಿಗೆಗೆ ಬಳಸಿ ಗಂಟೆಗೆ 800 ರೂಪಾಯಿಯಂತೆ 80ಸಾವಿರ ರೂಪಾಯಿ ಗಳಿಸಿದ್ದಾರೆ.
ಯಂತ್ರ ಹೀಗಿದೆ: ಯಂತ್ರಕ್ಕೆ ಹಿಂದೆ ಮುಂದೆ ಚಲಿಸಲು ಎರಡು ಗೇರ್ ಇವೆ. ಅಚ್ಚುಕಟ್ಟಾಗಿ ಸಾಲಾಗಿ ಜೋಡಿಸಿಟ್ಟಂತೆ ಸಸಿಗಳನ್ನು ಕತ್ತರಿಸಿ ಹಾಕುತ್ತದೆ. ಇದರಿಂದ ಒಂದು ಕಾಳು ಭತ್ತ ಕೂಡ ಉದುರುವುದಿಲ್ಲ, ಹುಲ್ಲು ಕೂಡ ಪುಡಿಯಾಗುವುದಿಲ್ಲ. ಹೀಗೆ ಮಾಡಿದರೆ ಎಕರೆಯೊಂದಕ್ಕೆ 40 ಕ್ವಿಂಟಲ್ ಭತ್ತ ಹಾಗೂ ಎರಡು ಸಾವಿರ ಕಂತೆ ಹುಲ್ಲು ಸಿಗುತ್ತದೆ.
ನಾಟಿಗೆ ಮೊದಲು ನಿಗದಿತ ಪ್ರಮಾಣದ ಸುಣ, ಒಂದು ಎಕರೆಗೆ ಆರು ಟ್ರ್ಯಾಕ್ಟರ್ನಷ್ಟು ಸೆಗಣಿ ಗೊಬ್ಬರ ಹಾಕುತ್ತಾರೆ. 70 ಕ್ವಿಂಟಲ್ ತುಂಗಾ ತಳಿಯ ಭತ್ತದ ಬೀಜವನ್ನು ಕೂಡಿಟ್ಟಿದ್ದು, ಬರ ಪರಿಸ್ಥಿತಿಯನ್ನರಿತು ಆಸಕ್ತರಿಗೆ ಹಂಚಿದ್ದಾರೆ. ಮೋಹನ್ ಅವರ ಪ್ರಕಾರ ಎಕರೆಗೆ 30ಸಾವಿರ ರೂಪಾಯಿ ವೆಚ್ಚವಾಗಿದೆ. ‘ಎರಡೂವರೆ ಎಕರೆಗೆ 75 ಕ್ವಿಂಟಲ್ ಭತ್ತ ಬಂದರೂ 1500 ರೂಪಾಯಿ ದರ ದೊರೆತರೂ ಲಾಭ. ನೀರಿನ ಸೌಕರ್ಯ ಮತ್ತು ಕಟಾವು ಯಂತ್ರವಿದ್ದರೆ ಭತ್ತ ಬೆಳೆಯುವುದು ಲಾಭ’ ಎನ್ನುತ್ತಾರೆ ಮೋಹನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.