ಸಾಕಾಣಿಕೆ ಮಾಡಿರುವ ಅಥವಾ ಸಹಜವಾಗಿಯೇ ಪೊದೆಗಳಲ್ಲಿ ಕಟ್ಟಿರುವ ಜೇನುಗೂಡಿನಿಂದ ತುಪ್ಪ ಕಿತ್ತುಕೊಳ್ಳಲು ಹೋದರೆ ಹುಳುಗಳು ಕಚ್ಚುತ್ತವೆ. ಇದನ್ನು ತಪ್ಪಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕುಂಟನಹಳ್ಳಿ ಗ್ರಾಮದ ಜೇನು ಕೃಷಿಕ ಲಕ್ಷ್ಮೇಗೌಡ ಹೊಸದಾಗಿ ಮುಖಪರದೆ ಸಿದ್ಧಪಡಿಸಿದ್ದಾರೆ.
ಟೋಪಿ ಆಕಾರದಲ್ಲಿ ಇರುವ ಈ ಮುಖಪರದೆಯ ತಲೆಯ ಮೇಲ್ಭಾಗ ಹಾಗೂ ಕುತ್ತಿಗೆಯ ಭಾಗದಲ್ಲಿ ದಪ್ಪನೆಯ ಕಾಟನ್ ಬಟ್ಟೆಯನ್ನು ಬಳಸಲಾಗಿದೆ. ಮುಖದ ಭಾಗದಲ್ಲಿ ಕಣ್ಣು ಕಾಣಿಸಲು ಹಾಗೂ ಉಸಿರಾಟಕ್ಕೆ ತೊಂದರೆಯಾಗದಂತೆ ದಪ್ಪನೆಯ ಸೊಳ್ಳೆ ಪರದೆಯನ್ನು ಬಳಸಲಾಗಿದೆ.
ಕೆಲವರು ಜೇನುಗೂಡಿನಿಂದ ತುಪ್ಪ ಪಡೆಯಲು ಹುಳುಗಳನ್ನು ಓಡಿಸಲು ಬೆಂಕಿ ಹಚ್ಚುತ್ತಾರೆ ಇಲ್ಲವೇ ಹೊಗೆ ಹಾಕುತ್ತಾರೆ. ಇದರಿಂದ ಹುಳುಗಳು ಸಾಯುತ್ತವೆ. ಕೃಷಿ ಹಾಗೂ ಪರಿಸರಕ್ಕೆ ಅತ್ಯಂತ ಉಪಯುಕ್ತವಾಗಿರುವ ಜೇನು ಹುಳುಗಳನ್ನು ಸಾಯಿಸದೆ ತುಪ್ಪ ಪಡೆಯಲು ಈ ಮುಖಪರದೆ ಅತ್ಯಂತ ಉಪಯುಕ್ತವಾಗಿದೆ ಎನ್ನುವ ಲಕ್ಷ್ಮೇಗೌಡ, ಇತ್ತೀಚೆಗೆ ತೋಟಗಾರಿಕೆ ಹಾಗೂ ಹಣ್ಣಿನ ಬೆಳೆಗಳಿಗೆ ರಾಸಾಯನಿಕ ಔಷಧಿ ಸಿಂಪರಣೆ ಮಾಡುತ್ತಿರುವುದರಿಂದ ಜೇನು ಹುಳುಗಳ ಸಂತತಿ ಕಣ್ಮರೆಯಾಗುತ್ತಿವೆ. ತುಪ್ಪ ಪಡೆಯುವ ಆಸೆಯಿಂದಾಗಿ ಹುಳುಗಳನ್ನು ಬೆಂಕಿ ಹಚ್ಚಿ ಸುಡುವುದನ್ನು ತಪ್ಪಿಸಲು ಮುಖಪರದೆಯನ್ನು ಸಿದ್ಧಪಡಿಸಲಾಗಿದೆ. ಮುಖಪರದೆ ಬೆಲೆ ₹ 350. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ–9844543335.