ನವದೆಹಲಿ (ಪಿಟಿಐ): ಹಕ್ಕುಸ್ವಾಮ್ಯದ ಕಿರಿಕಿರಿಗಳಿಲ್ಲದೆ ಪ್ರಕಟಗೊಂಡಿರುವ ಸಾಹಿತ್ಯ ಕೃತಿಗಳು ಅಂಧರಿಗೆ ಮತ್ತು ದೃಷ್ಟಿ ದೋಷ ಹೊಂದಿರುವವರಿಗೆ ಸುಲಭವಾಗಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಭಾರತವು ಅಂತರರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದೆ.
ದೃಷ್ಟಿ ದೋಷ ಹೊಂದಿರುವ, ಅಂಧ ವ್ಯಕ್ತಿಗಳಿಗೆ ಕೂಡ ಬರವಣಿಗೆ ಜಗತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಭಾರತವು ‘ಮರ್ರಕೇಶ್ ಒಪ್ಪಂದ’ಕ್ಕೆ ಕಳೆದ ಬುಧವಾರ ಜಿನೀವಾದಲ್ಲಿ ಸಹಿ ಹಾಕಿದೆ.
ಕಳೆದ ವರ್ಷದ ಜೂನ್ 23ರಂದು ನಡೆದಿದ್ದ ರಾಜತಾಂತ್ರಿಕ ಶೃಂಗಸಭೆಯಲ್ಲಿ ಈ ಒಪ್ಪಂದವನ್ನು ಅಂಗೀಕರಿಸಲಾಗಿತ್ತು. ಬ್ರೈಲ್, ಆಡಿಯೊ ಅಥವಾ ದೊಡ್ಡ ಮುದ್ರಣ ಸೇರಿದಂತೆ ಅಂಧರು, ದೃಷ್ಟಿ ದೋಷ ಹೊಂದಿರುವ ವ್ಯಕ್ತಿಗಳು ಬಳಸಬಹುದಾದ ರೀತಿಯಲ್ಲಿ ಹಕ್ಕುಸ್ವಾಮ್ಯದ ಕೃತಿಗಳನ್ನು ರೂಪಿಸಲು ಮತ್ತು ಅಂಧ–ಸ್ನೇಹಿ ಪುಸ್ತಕಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ರಫ್ತು ಮಾಡಲೂ ಈ ಒಪ್ಪಂದ ಅವಕಾಶ ಕಲ್ಪಿಸುತ್ತದೆ.