‘ದೇಗುಲ ಪ್ರವೇಶ ನಿರ್ಬಂಧ’ಕ್ಕೆ ಸಂಬಂಧಿಸಿದ ವಿಷಯವಾಗಿ ಡಾ.ರಾಜಾರಾಮ ಹೆಗಡೆಯವರು ವಾಸ್ತವ ವಿಚಾರವನ್ನು ಮುಂದಿಟ್ಟಿದ್ದಾರೆ (ಪ್ರ.ವಾ., ಅಂತರಾಳ, ಜ. 30). ನಾನು ಅನೇಕ ಪತ್ರಿಕೆಗಳಿಗೆ ‘ಹಿಂದೂ’ ಎಂಬುದು ಮತವೂ ಅಲ್ಲ ‘ಧರ್ಮ’ವೂ ಅಲ್ಲ ಎಂದು ಬರೆದು ಬರೆದು ಸಾಕಾದೆ. ಸದ್ಯ ಹೆಗಡೆಯವರ ವಿವರಣೆಯಾದರೂ ಪ್ರಕಟವಾಯ್ತಲ್ಲ.
ಇಂಗ್ಲಿಷಿನ ‘ರಿಲಿಜಿಯನ್’ ಎಂಬುದನ್ನು ‘ಮತ’ ಎಂದು ಅನುವಾದ ಮಾಡದೆ ಧರ್ಮ ಎಂದು ಅನುವಾದ ಮಾಡಿಕೊಂಡು ತಿಳಿದವರು ಬರೆದದ್ದೂ ಬರೆದದ್ದೆ. ‘ಹಿಂದೂ’ ಎಂಬುದು ರಿಲಿಜಿಯನ್ ಎಂಬ ಶಬ್ದಕ್ಕೂ ಸಿಗದೆ ನುಣುಚಿಕೊಳ್ಳುವುದನ್ನು ಹೆಗಡೆಯವರು ಸಮರ್ಪಕವಾಗಿ ನಿರೂಪಿಸಿದ್ದಾರೆ.
ಇನ್ನಾದರೂ ಭಾಷಣಕಾರರು, ಲೇಖಕರು ‘ಮತ’ ಮತ್ತು ‘ಧರ್ಮ’ ಶಬ್ದಗಳಿಗೆ ಇರುವ ಅಗಾಧ ವ್ಯತ್ಯಾಸವನ್ನು ಅರಿತು ‘ಮತಸ್ಥಾಪಕ’, ‘ಮತಗ್ರಂಥ’, ‘ಮತಾಂಧತೆ’, ‘ಮತಾಚಾರ’ ಎಂದು ಪ್ರಯೋಗಿಸಲಿ. ಜೈನ, ಬೌದ್ಧ, ಪಾರ್ಸಿ, ಇಸ್ಲಾಂ, ಬಹಾಯಿ, ಯಹೂದಿ ಇತ್ಯಾದಿಗಳನ್ನು ಧರ್ಮ ಎಂಬ ಪ್ರತ್ಯಯ ಸೇರಿಸಿ ಹೇಳುವುದು ವಿಷಯದ ಸ್ಪಷ್ಟತೆಗೆ ಅಡ್ಡಿಯಾಗುತ್ತದೆ.