ಬೆಂಗಳೂರು: ‘ಫೈಲ್ಗೂ, ಫೋಲ್ಡರ್ಗೂ ಏನು ವ್ಯತ್ಯಾಸ? ಕಂಪ್ಯೂಟರ್ ಆನ್ ಮಾಡಿದ ತಕ್ಷಣ ಇ–ತಂತ್ರಾಂಶ ಬಂದುಬಿಡುತ್ತಾ? ಇಡೀ ಫೋಲ್ಡರ್ಅನ್ನೇ ಯೂನಿಕೋಡ್ಗೆ ಪರಿವರ್ತಿಸಬಹುದಾ? ಅಯ್ಯಯ್ಯೊ ನಾನಂತೂ ಕಂಪ್ಯೂಟರ್ ಆಪರೇಟ್ ಮಾಡಿಯೇ ಇಲ್ಲ! ಫೈಲ್ ಓಪನ್ ಮಾಡುವುದು ಹೇಗೆ? ತುಂಬಾ ಕಷ್ಟ ಸರ್...! ಇರಲಿ ಬಿಡಿ, ನಿಧಾನಕ್ಕೆ ಅರ್ಥವಾಗುತ್ತೆ. ನಿಮ್ಮ ಮಕ್ಕಳು ಅಥವಾ ಮೊಮ್ಮಕ್ಕಳಲ್ಲಿ ಕೇಳಿ ಎಲ್ಲಾ ಹೇಳಿಕೊಡುತ್ತಾರೆ...!
–ಈ ರೀತಿಯ ಪ್ರಶ್ನೆಗಳು ಎದುರಾಗಿದ್ದು, ಆತಂಕ ವ್ಯಕ್ತವಾಗಿದ್ದು ಹಾಗೂ ತಮಾಷೆ ನಡೆದಿದ್ದು ಕನ್ನಡ ಇ–ತಂತ್ರಾಂಶ ಬಳಕೆಯ ಬಗ್ಗೆ ಮಾಹಿತಿ ನೀಡಲು ಕನ್ನಡ ಭವನದ ನಯನ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಇಲಾಖೆ ಸಿಬ್ಬಂದಿ, ಸಹಾಯಕ ನಿರ್ದೇಶಕರು, ಪ್ರಾಧಿಕಾರದ ಸಿಬ್ಬಂದಿ ಹಾಗೂ ಇತರ ನೌಕರರು ಪಾಲ್ಗೊಂಡಿದ್ದರು.
ತಂತ್ರಾಂಶವನ್ನು ಡೌನ್ಲೋಡ್ ಮಾಡುವುದು, ಯೂನಿಕೋಡ್ ಅಕ್ಷರ ವಿನ್ಯಾಸಗಳು, ಕ್ಷೇಮ ಕೀಲಿಮಣೆ ವಿನ್ಯಾಸ, ಪರಿವರ್ತಕ (ಆಸ್ಕಿಯಿಂದ ಯೂನಿಕೋಡ್ಗೆ), ಬ್ರೈಲ್ ಕನ್ನಡ ತಂತ್ರಾಂಶ, ಮೊಬೈಲ್ ಫೋನ್ನಲ್ಲಿ ಕನ್ನಡ ಬಳಕೆ ಹಾಗೂ ಅಳವಡಿಕೆ ಬಗ್ಗೆ ಪ್ರಾತ್ಯಕ್ಷತೆ ಹಾಗೂ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಹಾಸನದ ಮಾರುತಿ ತಂತ್ರಾಂಶ ಅಭಿವೃದ್ಧಿ ಕೇಂದ್ರದವರು ಕಾರ್ಯಾಗಾರ ನಡೆಸಿಕೊಟ್ಟರು.
ಇಲಾಖೆ ನಿರ್ದೇಶಕ ಕೆ.ಎ. ದಯಾನಂದ್, ‘ಇ–ತಂತ್ರಾಂಶ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು. 30 ಸಹಾಯಕ ನಿರ್ದೇಶಕರು ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರದ ಸಹಾಯಕ ನಿರ್ದೇಶಕ ಚಂದ್ರಹಾಸ ರೈ,
‘ಇ–ತಂತ್ರಾಂಶ ಅಳವಡಿಸಿಕೊಂಡರೆ ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬಹುದು. ಕಡತಗಳು ಯಾವ ಹಂತದಲ್ಲಿವೆ ಎಂಬುದನ್ನು ತಿಳಿದುಕೊಳ್ಳಲು ಸುಲಭವಾಗುತ್ತದೆ ಎಂದರು.