ಸುವರ್ಣಸೌಧ (ಬೆಳಗಾವಿ): ಮರಳು ಮತ್ತು ಇತರ ಖನಿಜಗಳ ಗಣಿಗಾರಿಕೆ ಕುರಿತಂತೆ ‘ಸದನ ಅಧ್ಯಯನ ಸಮಿತಿ’ ರಚಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ವಿಧಾನಸಭೆಯಲ್ಲಿ ಗುರುವಾರ ಪ್ರಕಟಿಸಿದರು.
ಮರಳು ಗಣಿಗಾರಿಕೆ ವಿಚಾರದಲ್ಲಿ ಇರುವ ಕಾನೂನು ಮತ್ತು ಆಡಳಿತಾತ್ಮಕ ತೊಡಕುಗಳ ಬಗ್ಗೆ ಸಮಿತಿ ವರದಿ ಸಲ್ಲಿಸಲಿದೆ. ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ನೆರೆ ರಾಜ್ಯಗಳು ಯಾವ ನೀತಿ ಅನುಸರಿಸುತ್ತಿವೆ ಎಂಬ ಬಗ್ಗೆಯೂ ಪರಿಶೀಲಿಸಲಿದೆ ಎಂದರು.
ಫಿಲ್ಟರ್ ಮರಳು ದಂಧೆಗೆ ಸರ್ಕಾರ ಕಡಿವಾಣ ಹಾಕಲಿದೆ ಎಂದು ಪುನರುಚ್ಚರಿಸಿದರು.
ರಾಜ್ಯದ ಗಡಿ ಭಾಗಗಳಿಂದ ನೆರೆ ರಾಜ್ಯಗಳಿಗೆ ಮರಳು ಅಕ್ರಮವಾಗಿ ಸಾಗಣೆ ಆಗಿದೆ ಎಂಬ ಆರೋಪಗಳ ಕುರಿತು ಸಿಒಡಿ ತನಿಖೆ ನಡೆಸಲಾಗುವುದು.
‘ಸಚಿವರು ಜವಾಬ್ದಾರರು’ ಟಿ. ನರಸೀಪುರ ತಾಲ್ಲೂಕಿನ ನದಿ ಪಾತ್ರದ ಮರಳು ಕೇರಳಕ್ಕೆ ಅಕ್ರಮವಾಗಿ ಸಾಗಣೆ ಆಗುತ್ತಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಸಚಿವರು ಜವಾಬ್ದಾರಿ ಹೊರಬೇಕು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ ಮಾತು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ಕೂಡ ನಡೆಯಿತು. |
ಜನಸಾಮಾನ್ಯರು ನಿತ್ಯದ ಬಳಕೆಗೆ ಮರಳು ಪಡೆದುಕೊಳ್ಳುವಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ಕರೆದು ಸೂಚಿಸಲಾಗುವುದು ಎಂದು ಜಯಚಂದ್ರ ಹೇಳಿದರು.
ಸಭಾತ್ಯಾಗ, ಧರಣಿ: ಇದಕ್ಕೂ ಮೊದಲು, ಮರಳು ಅಕ್ರಮ ಸಾಗಣೆ ತಡೆಯುವುದು ಹೇಗೆ ಎಂಬ ಬಗ್ಗೆ ಸರ್ಕಾರ ನೀಡಿದ ಉತ್ತರ ತೃಪ್ತಿಕರವಾಗಿಲ್ಲ ಎಂದು ಬಿಜೆಪಿ ವಿಧಾನಸಭೆಯಲ್ಲಿ ಗುರುವಾರ ಸಭಾತ್ಯಾಗ ನಡೆಸಿತು.
ಅಕ್ರಮದ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಸದಸ್ಯರು ಸ್ಪೀಕರ್ ಎದುರಿನ ಅಂಗಳದಲ್ಲಿ ಧರಣಿ ನಡೆಸಿದರು. ಆಗ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸದನವನ್ನು ಹತ್ತು ನಿಮಿಷ ಮುಂದೂಡಿದರು. ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ ನಡೆದ ನಂತರ ಸದನ ಸಮಿತಿ ರಚಿಸುವುದಾಗಿ ಸಚಿವರು ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.