ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಮೂರ್ತಿಗೆ ನುಡಿಗೌರವ

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ನನ್ನ ವಿದ್ಯಾರ್ಥಿ ಜೀವ­ನ­ದಲ್ಲಿ ಅನಂತ ಮೂರ್ತಿ ‘ಐಕಾನ್‌’ ಆಗಿದ್ದರು. ಯಾವ ಮೂರ್ತಿಯನ್ನು ಬೇಕಾದರೂ ಭಂಜಿಸ­ಬಹುದು ಎಂಬ ಆತ್ಮಸ್ಥೈರ್ಯ ತುಂಬಿ­ದ್ದರು’ ಎಂದು ವಿಮರ್ಶಕ ಸಿ.ಎನ್‌.­ರಾಮಚಂದ್ರನ್‌ ನೆನಪಿಸಿಕೊಂಡರು.

ಸಾಹಿತ್ಯ ಅಕಾಡೆಮಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯು.ಆರ್‌.­­ಅನಂತಮೂರ್ತಿ ಅವರಿಗೆ ನುಡಿಗೌರವ’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಯಾವ ಪ್ರವೃತ್ತಿಯನ್ನೂ ಅದು ಮಿಡಬಾರದು. ಎಲ್ಲದರಲ್ಲೂ ತೃಪ್ತಿ ಗಳಿಸಬೇಕು ಎಂಬುದು ಅವರ ಮಾತಾ ಗಿತ್ತು. ಮೈಸೂರಿನ ಮಹಾ­ರಾಜ ಕಾಲೇ­ಜಿನಲ್ಲಿ ಅವರ ಜೊತೆ ಕ್ಯಾಂಟೀನ್‌­­ನಲ್ಲಿ ಹರಟುತ್ತಿದ್ದೆವು. ‘ಸ್ವಾಮಿ ವಿವೇಕಾನಂದರು ಹೆಚ್ಚು ಸಿಹಿ ತಿನ್ನುತ್ತಿದ್ದರು. ಏಕೆಂದರೆ, ಎಲ್ಲವನ್ನೂ ಬಿಟ್ಟ ಅವರು ಇನ್ನೊಂದರಲ್ಲಿ ತೃಪ್ತಿ ಪಡೆಯಲು ಬಯಸಿದ್ದರು’ ಎಂದು ಅವರು ವಿಶ್ಲೇಷಿಸುತ್ತಿದ್ದರು. ಅವರ ನಿರ್ಭಿಡೆಯ ಮಾತುಗಳಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೆ’ ಎಂದು ತಮ್ಮ ನೆನಪು ಹಂಚಿಕೊಂಡರು.

ಕವಿ ಎಚ್‌.ಎಸ್‌.­ವೆಂಕಟೇಶ­ಮೂರ್ತಿ, ‘ಅನಂತಮೂರ್ತಿ ಅವರಿಗೆ ರನ್ನ, ಪಂಪರು ಮುಖ್ಯರಾದಂತೆ ಇಂದಿನ ಹೊಸ ಲೇಖಕರೂ  ಮುಖ್ಯವಾಗಿದ್ದರು. ಹೊಸ ಲೇಖಕರು ಬರೆದ ಯಾವುದೇ ವಿಷಯದ ಕುರಿತು ಆಸಕ್ತಿ, ಪ್ರೀತಿಯಿತ್ತು’ ಎಂದರು.‘ಅನಂತಮೂರ್ತಿ ಅವರು ಎಂದಿಗೂ ಜನಪ್ರಿಯತೆ ಗಾಗಿ ಮಾತಾಡಲಿಲ್ಲ. ವ್ಯವಸ್ಥೆಯ ಜೊತೆಗಿದ್ದೇ ವಿರೋಧ ಪಕ್ಷದವರಂತೆ ಕಾರ್ಯ ನಿರ್ವಹಿಸಿದರು’ ಎಂದು ಕವಿ ಎಲ್‌. ಹನುಮಂತಯ್ಯ ಹೇಳಿದರು.

ಸಾಹಿತಿ ಚಂದ್ರಶೇಖರ ಕಂಬಾರ, ‘ಎಲ್ಲರಲ್ಲಿ ಎಲ್ಲಾ ಬಗೆಯ ಸ್ಪಂದನೆ, ಪ್ರತಿಕ್ರಿಯೆಗಳನ್ನು ಹುಟ್ಟಿಸಿದರು. ಹೊಸ ಮನಸ್ಸುಗಳಿಗೆ ಮಾರ್ಗದರ್ಶಕ­ರಾದರು. ಅವರ ನೆನಪು ನಮ್ಮಲ್ಲಿ ಸದಾ ಹಸಿರು’ ಎಂದು ನುಡಿದರು. ವಿಮರ್ಶಕ ಪ್ರೊ. ನರಹಳ್ಳಿ ಬಾಲ­ಸುಬ್ರಹ್ಮಣ್ಯ ಮಾತನಾಡಿ, ‘ಜಾಗತಿಕ ಸಾಹಿತ್ಯದ ಒಡನಾಟವಿಟ್ಟುಕೊಂಡು ಜಾಗತಿಕ ಸಾಹಿತ್ಯವನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟವರು. ಎಲ್ಲರ ಜತೆಗೆ ಸೃಜನಶೀಲವಾಗಿ ಜಗಳ ಮಾಡುತ್ತಿದ್ದ ಅವರು ಅನೇಕ ಟೀಕೆಗೆ ಗುರಿಯಾಗ­ಬೇಕಾಯಿತು’ ಎಂದು ಹೇಳಿದರು.

ವಿಚಾರವಾದಿ ಪ್ರೊ.ಜಿ.ಕೆ.­ಗೋವಿಂದ ರಾವ್‌, ಲೇಖಕ ವಿವೇಕ ಶಾನಭಾಗ,  ವಿಮರ್ಶಕಿ ಎಂ.ಎಸ್‌.­ಆಶಾದೇವಿ, ಪತ್ರಕರ್ತ ಎನ್‌.ಎ.ಎಂ.­ಇಸ್ಮಾಯಿಲ್‌ ಅವರು ಅನಂತ­ಮೂರ್ತಿ ಅವರೊಂದಿ ಗಿನ ಒಡನಾಟವನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT