ಗುಲ್ಬರ್ಗ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯು.ಆರ್.ಅನಂತಮೂರ್ತಿ ಅವರದ್ದು ಗೌರವ ಸ್ಥಾನವಾಗಿದ್ದು (Honorary Position), ವಿ.ವಿ.ಯಿಂದ ಅವರಿಗೆ ಯಾವುದೇ ರೀತಿಯ ಸಂಬಳ ಪಾವತಿಸುತ್ತಿಲ್ಲ ಎಂದು ವಿ.ವಿ ಪ್ರಭಾರ ಕುಲಪತಿ ಪ್ರೊ.ಎಂ.ಎನ್.ಸುಧೀಂದ್ರರಾವ್ ಸ್ಪಷ್ಟಪಡಿಸಿದ್ದಾರೆ.
ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಪತ್ರ ಸಂಖ್ಯೆ ನಂ.ಎಫ್.57–5/2012) ವತಿಯಿಂದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಅನಂತಮೂರ್ತಿ ಅವರನ್ನು ಐದು ವರ್ಷಗಳ ಅವಧಿಗೆ ಕುಲಾಧಿಪತಿಯಾಗಿ ನೇಮಕ ಮಾಡಿದ್ದು, 2012ರ ಆಗಸ್ಟ್ 17 ರಿಂದ ಅನಂತಮೂರ್ತಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರಿನಲ್ಲಿರುವ ಅವರ ಕಚೇರಿ ನಿರ್ವಹಣೆಗಾಗಿ ಪ್ರತಿ ತಿಂಗಳು ₨ 15 ಸಾವಿರ ಪಾವತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಪ್ರವಾಸಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಯಾಣ ಹಾಗೂ ತುಟ್ಟಿಭತ್ಯೆ ನೀಡಲಾಗುತ್ತದೆ.
ಪ್ರಥಮ ದರ್ಜೆ ಹವಾನಿಯಂತ್ರಿತ ಬೋಗಿ (ಎ.ಸಿ) ಹಾಗೂ ಎಕ್ಸಿಕ್ಯುಟಿವ್ ದರ್ಜೆ ವಿಮಾನದಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.