ಬೆಂಗಳೂರು: ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ವಾತಾವರಣ ದೇಶದಲ್ಲಿ ಬೆಳೆಯುತ್ತಿದೆ’ ಎಂದು ಹೇಳಿರುವ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್, ಅನುವಾದ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ್ದ ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ್ದಾರೆ.
ರಾಜಮೋಹನ ಗಾಂಧಿ ಅವರ ‘ಮೋಹನದಾಸ್: ಒಂದು ಸತ್ಯಕಥೆ’ ಅನುವಾದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2014ನೇ ಸಾಲಿನ ಅನುವಾದ ಸಾಹಿತ್ಯ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿ ₹ 50 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿತ್ತು.
‘ಸಾಹಿತ್ಯ ಅಕಾಡೆಮಿ ಒಂದು ಸ್ವಾಯತ್ತ ಸಂಸ್ಥೆ. ಅದು ರಾಜಕೀಯ ಸಂಸ್ಥೆಯಲ್ಲ. ಆದರೆ, ಸಾಹಿತ್ಯ ವಲಯಕ್ಕೇ ಬೆದರಿಕೆ ಎದುರಾಗಿರುವ ಈ ಹೊತ್ತಿನಲ್ಲಿ ಅಕಾಡೆಮಿ ಅದನ್ನು ಎದುರಿಸಲು ಬೇಕಿರುವ ದೃಢ ನಿಲುವು ತಾಳುತ್ತಿಲ್ಲ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ರಂಗನಾಥ ರಾವ್ ಹೇಳಿದರು.
ಪ್ರಶಸ್ತಿಯ ಜೊತೆ ಬಂದಿದ್ದ ನಗದು ಮತ್ತು ಫಲಕವನ್ನು ಅಂಚೆಯ ಮೂಲಕ ಸೋಮವಾರ ವಾಪಸ್ ಕಳುಹಿಸುತ್ತಿದ್ದೇನೆ ಎಂದು ಅವರು ಹೇಳಿದರು.