ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಸ್ತುತ ಹಿರಿಯರು: ಧೋರಣೆಗೆ ಟೀಕೆ

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸಾಗರ: ‘ಆಧುನಿಕತೆಯ ಪ್ರಭಾವದಿಂದ ತ್ಯಾಜ್ಯ ಎಂಬುದು ವಸ್ತುಗಳ ವಲಯ­ದಿಂದ ವ್ಯಕ್ತಿಗಳ ವಲಯಕ್ಕೆ ಪ್ರವೇಶಿ­ಸುತ್ತಿದೆ’ ಎಂದು ಸಮಾಜ ವಿಜ್ಞಾನಿ ಶಿವವಿಶ್ವನಾಥನ್ ಆತಂಕ ವ್ಯಕ್ತಪಡಿ­ಸಿದರು. ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ ಸಂಸ್ಕೃತಿ ಶಿಬಿರ’ದಲ್ಲಿ ಭಾನುವಾರ ‘ತ್ಯಾಜ್ಯ ಪರಿಕಲ್ಪನೆಯ ಹೊಸ ಹೊಳಹುಗಳು’ ವಿಷಯದ ಮೇಲೆ ಮಾತನಾಡಿದರು.

‘ವ್ಯಕ್ತಿಗಳ ವಲಯಕ್ಕೆ ಪ್ರವೇಶಿಸು­ತ್ತಿರುವ ತ್ಯಾಜ್ಯದ ದೃಷ್ಟಿಕೋನದಿಂದಾಗಿ ಹಿರಿಯರನ್ನು ನಿಷ್ಪ್ರಯೋಜಕ ಎಂದು ಪರಿಗಣಿಸಲಾಗುತ್ತಿದೆ.  ಹಿರಿಯರಿಂದ ಪಡೆಯುತ್ತಿದ್ದ ಜ್ಞಾನವನ್ನೇ ಅಂತ­ರ್ಜಾಲದ ಮೂಲಕವೂ ಪಡೆಯ­ಬಹುದೆಂಬ ಅಹಂ ಪ್ರದರ್ಶಿಸುತ್ತಿದ್ದೇವೆ’ ಎಂದು ವಿಶ್ಲೇಷಿಸಿದರು.

‘ಈ ಪಲ್ಲಟ ಅಮೆರಿಕ, ಆಫ್ರಿಕಾ­ದಂತಹ ಬಡ ದೇಶಕ್ಕೆ ನೆರವು ನೀಡಿದರೆ ಪ್ರಯೋಜನವಿಲ್ಲ ಎಂಬ ಸನ್ನಿವೇಶವನ್ನೂ ನಿರ್ಮಿಸುತ್ತಿದೆ. ದೇಶದಲ್ಲಿ ದುರ್ಬಲರ ಸೇವೆ ಮಾಡಿದ ಮದರ್‌ ತೆರೆಸಾ ಕೂಡ ಅಪ್ರಸ್ತುತ ಎನಿಸಿದರೆ ಆಶ್ಚರ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ಹಳ್ಳಿಗಳಿಗೆ ನಗರದ ದೊಡ್ಡ ಕೊಡು­ಗೆಯೇ ತ್ಯಾಜ್ಯ. ಇದನ್ನು ವಿಂಗಡಿಸು­ವವರಲ್ಲಿ, ವಿಲೇವಾರಿ ಮಾಡುವವ­ರಲ್ಲೇ ಮೇಲು–ಕೀಳಿನ ಭಾವ ಸೃಷ್ಟಿಯಾಗುತ್ತಿದೆ. ವಿಲೇವಾರಿ ಮಾಡುವ­ವರಿಗೂ ಘನತೆಯ ಬದುಕುಂಟು ಎಂದು ಅರಿಯಬೇಕಿದೆ ಎಂದರು.

‘ಹೊಸ ನಗರಗಳನ್ನು ನಿರ್ಮಾಣ ಮಾಡುವಾಗ ಅನೇಕ ಗ್ರಾಮಗಳನ್ನು ನೆಲಸಮ ಮಾಡಿದ್ದೇವೆ. ಈ ಪ್ರದೇಶಗಳಲ್ಲಿ ಪ್ರಾಕೃತಿಕ ತ್ಯಾಜ್ಯಗಳು ಹೇರಳವಾಗಿವೆ ಎಂಬುದನ್ನು ಮರೆ­ತಿದ್ದೇವೆ. ಹಳ್ಳಿಯ ಭಗ್ನಾವಶೇಷಗಳು ಅಪ್ರಯೋಜಕವಲ್ಲ. ಅವುಗಳು ನೆನಪು­ಗಳನ್ನು ಕಟ್ಟಿಕೊಡುವ ಸಾಧನಗಳಾಗಿವೆ’ ಎಂದು ಬಣ್ಣಿಸಿದರು.

‘ತ್ಯಾಜ್ಯವೆಂಬುದು ದೇಶದಲ್ಲಿ ಅನೌಪ­ಚಾರಿಕ ಅರ್ಥಶಾಸ್ತ್ರದಂತೆ, ರಾಜಕೀಯ ಕ್ಷೇತ್ರದ ಪ್ರಮುಖ ಭಾಗವೆನ್ನುವುದನ್ನು ಮರೆಯಲಾಗದು. ತಳಮಟ್ಟದ ಮಂದಿ ಕೈಗೊಳ್ಳುವ ವೃತ್ತಿಗಳ ಮೂಲಕವೇ ದೇಶದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೆ ವಿನಾ ಪುಸ್ತಕಗಳ ಆಧಾರದ ಮೇಲೆ ಅಲ್ಲ’ ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ನಡೆದ ಗೋಷ್ಠಿ­ಯಲ್ಲಿ ಶನಿವಾರ ಪ್ರದರ್ಶನಗೊಂಡ ‘ಚಿರಕುಮಾರ ಸಭಾ’ ನಾಟಕದ ಬಗ್ಗೆ ಚರ್ಚೆ, ಸಂವಾದ ನಡೆಯಿತು. ಮಧ್ಯಾಹ್ನ ವೈದೇಹಿ ಅವರ ಕಥೆ ಆಧರಿಸಿದ ’ಕ್ರೌಂಚ ಪಕ್ಷಿಗಳು’ ನಾಟಕವನ್ನು ನೀನಾಸಂ ಬಳಗದ ಕಲಾವಿದರು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT