ಬೆಂಗಳೂರು: ನಗರದ ವಿವಿಧೆಡೆ ಶನಿವಾರ ಸಂಜೆ ಸುರಿದ ಮಳೆ ಸೆಕೆಯಿಂದ ಕಂಗೆಟ್ಟಿದ್ದ ಜನತೆಗೆ ತಂಪೆರೆಯಿತು. ಸುಮಾರು ಅರ್ಧಗಂಟೆ ಬಿರುಸಿನಿಂದ ಸುರಿದ ಮಳೆಯಿಂದಾಗಿ 9 ಮರಗಳು ನೆಲಕ್ಕುರುಳಿದ್ದು, ಕೆಲವೆಡೆ ಮರದ ಟೊಂಗೆಗಳು ಬಿದ್ದಿವೆ. ಜತೆಗೆ ಎರಡು ಕಡೆಗಳಲ್ಲಿ ಮಳೆ ನೀರು ಮನೆಗೆ ನುಗ್ಗಿದೆ.
ಜೆ.ಪಿ. ನಗರ ಎರಡನೇ ಹಂತ, ಎಂ.ಜಿ. ರಸ್ತೆ, ಚಂದ್ರಾ ಬಡಾವಣೆ, ಕಸವನಹಳ್ಳಿ, ಗಂಗಾನಗರ, ಕುಮಾರಸ್ವಾಮಿ ಬಡಾವಣೆ ಹಾಗೂ ಎಚ್ ಎಸ್ಆರ್ ಬಡಾವಣೆಯಲ್ಲಿ ತಲಾ ಒಂದು ಮರ ಬಿದ್ದಿದೆ. ಎಚ್ಎಸ್ಆರ್ ಮುಖ್ಯರಸ್ತೆಯಲ್ಲಿ ಎರಡು ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಎಚ್ಎಸ್ಆರ್ ಬಡಾವಣೆ ಪೊಲೀಸ್ ಠಾಣೆ ಸಮೀಪದ ಮೂರು ಮನೆಗಳಲ್ಲಿ ನೀರು ನುಗ್ಗಿದೆ. ವಾರ್ಡ್ ನಂಬರ್ 193ರ ವ್ಯಾಪ್ತಿಯ ಕೃಷ್ಣಾ ಬಡಾವಣೆ ತಗ್ಗು ಪ್ರದೇಶದಲ್ಲಿದ್ದ ಮನೆಯೊಂದರಲ್ಲಿ ಭಾಗಶಃ ನೀರು ಆವರಿಸಿಕೊಂಡಿತ್ತು. ಅಲ್ಲಿಯ ನಿವಾಸಿಗಳು ನೀರನ್ನು ಹೊರಹಾಕುತ್ತಿದ್ದ ದೃಶ್ಯಗಳು ಕಂಡುಬಂದವು.
ಜೆ.ಸಿ. ರಸ್ತೆಯ ಜರ್ನಲಿಸ್ಟ್ ಕಾಲೊನಿ, ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಲ್ಲಿ ನೀರು ನಿಂತುಕೊಂಡಿತ್ತು. ಸ್ಥಳಕ್ಕೆ ಹೋದ ಬಿಬಿಎಂಪಿ ಸಿಬ್ಬಂದಿ ರಸ್ತೆಯಲ್ಲಿ ನೀರು ತೆಗೆದರು.
ಜತೆಗೆ ಎಚ್ಎಸ್ಆರ್ ಬಡಾವಣೆಯ 3ನೇ ಹಂತದ ರಸ್ತೆಯೊಂದರಲ್ಲಿ ಒಳಚರಂಡಿ ಬಂದ್ ಆಗಿತ್ತು. ಅದರಿಂದ ಒಳಚರಂಡಿ ನೀರು ರಸ್ತೆ ಮೇಲೆ ಹರಿಯಿತು. ಈ ವೇಳೆ ಚರಂಡಿಯಲ್ಲಿದ್ದ ತ್ಯಾಜ್ಯವು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.
ಇಂದಿರಾನಗರ, ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ, ಬಸವೇಶ್ವರ ನಗರ, ವಿಲ್ಸನ್ ಗಾರ್ಡನ್, ಕೋರಮಂಗಲ, ಆರ್.ಟಿ. ನಗರ, ಪೀಣ್ಯ, ಮಡಿವಾಳ, ಎಚ್ಎಸ್ಆರ್ ಬಡಾವಣೆ, ಯಶವಂತಪುರ, ಯಲಹಂಕ, ದೊಡ್ಡಬೊಮ್ಮಸಂದ್ರ, ಹೆಬ್ಬಾಳ, ವಸಂತನಗರ, ಬನಶಂಕರಿ, ಬಸವನಗುಡಿ, ಚಾಮರಾಜಪೇಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಸುರಿದಿದೆ.
ಮಳೆ ಸುರಿದ ವೇಳೆ ರಸ್ತೆ ಮೇಲೆ ನೀರು ಹರಿದಿದ್ದರಿಂದ ರಾಜಾಜಿನಗರ, ಶಿವಾಜಿನಗರ, ಎಚ್ಎಸ್ಆರ್ ಬಡಾವಣೆ ಸೇರಿ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು. ಅದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.