ಜುಲೈ ೨೭ರಂದು ಶಿರಸಿಯಿಂದ ಸಾಗರಕ್ಕೆ ತೆರಳುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸನ್ನು ಸಾಗರಕ್ಕೆ ಹೋಗುವ ಉದ್ದೇಶದಿಂದ ಸಿದ್ದಾಪುರದಲ್ಲಿ ಸಂಜೆ ೫.೧೦ಕ್ಕೆ ಏರಿದೆ. ಬಸ್ ಹೊಸೂರು ವೃತ್ತವನ್ನು ದಾಟಿ ತುಸು ದೂರ ಬಂದ ನಂತರ ಒಮ್ಮೆಗೇ ನಿಂತಿತು. ನಮಗೆ ಏನು ಎತ್ತ ಅಂತ ಅರ್ಥವಾಗುವ ಮುನ್ನವೇ ಬಸ್ ನಿರ್ವಾಹಕಿ ಸುಮಾರು ಎಂಟು ವರ್ಷದ ಶಾಲಾ ಬಾಲಕಿಯನ್ನು ಕೆಳಗೆ ಇಳಿಸಿದಳು.
ಒಂದೆಡೆ ವಿಪರೀತ ಗಾಳಿ, ಮಳೆ. ನಿರ್ಜನ ಪ್ರದೇಶ. ಆ ಜಾಗದಲ್ಲಿ ಬಾಲಕಿಯನ್ನು ಇಳಿಸಿದ ಕಾರಣ ಕೆದಕಿದ ಮೇಲೆ ನಿರ್ವಾಹಕಿ ಉಡಾಫೆಯಿಂದ ‘ಆಕೆ ಬಸ್ ಪಾಸ್ ಕಳೆದುಕೊಂಡಿದ್ದಾಳಂತೆ. ಹಾಗಾಗಿ ದುಡ್ಡು ಕೊಟ್ಟು ಟಿಕೆಟ್ ಪಡೆಯಬೇಕು. ಬಸ್ ಚಾರ್ಜ್ ಕೊಡಲಾಗದು ಅಂತ ಅವಳೇ ಕೆಳಗಿಳಿದಳು’ ಎಂದು ಉತ್ತರಿಸಿದಳು.
ನಾನು ಹಾಗೂ ಸಹಪ್ರಯಾಣಿಕರೊಬ್ಬರು ‘ಆಕೆಯ ಬಸ್ ಟಿಕೆಟ್ಟನ್ನು ನಾವು ತೆಗೆಯುತ್ತೇವೆ. ಅತ್ಯಾಚಾರ ಪ್ರಕರಣಗಳು ಹೆದರಿಕೆ ಹುಟ್ಟಿಸಿರುವಾಗ ನಿರ್ಜನ ಪ್ರದೇಶದಲ್ಲಿ ಬಾಲಕಿಯನ್ನು ಇಳಿಸಿದ್ದು ನಾಗರಿಕ ವರ್ತನೆಯಲ್ಲ. ಮಾನವೀಯತೆಯನ್ನು ಮೀರಿದ ಕಾನೂನಿಲ್ಲ. ಬಸ್ ಹಿಂದಕ್ಕೆ ಹೋಗಿ ಅವಳನ್ನು ಕರೆತರಬೇಕು’ ಎಂದು ಆಗ್ರಹಿಸಿದರೂ ಮಹಿಳಾ ಕುಲವನ್ನು ಪ್ರತಿನಿಧಿಸುವ ನಿರ್ವಾಹಕಿಯಾಗಲಿ, ಬಸ್ ಚಾಲಕರಾಗಲಿ ಸ್ಪಂದಿಸಲಿಲ್ಲ. ಅಂತಿಮ ಪ್ರಯತ್ನವಾಗಿ, ಕವಂಚೂರು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಮತ್ಯಾರಿಗೋ ಫೋನ್ ಮಾಡಿ, ಬಾಲಕಿ ಇಳಿದ ಸ್ಥಳವನ್ನು ವಿವರಿಸಿ, ಅವಳನ್ನು ಸುರಕ್ಷಿತವಾಗಿ ಮನೆ ಸೇರಿಸಲು ಸೂಚಿಸಿದರು.
ಕಾನೂನಿನ ಪ್ರಕಾರ, ಬಸ್ ನಿರ್ವಾಹಕಿಯು ಬಸ್ ಪಾಸ್ ಇಲ್ಲದ ಬಾಲಕಿಯಿಂದ ಹಣ ಪಡೆದು ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಆಕೆಯ ತಪ್ಪಾಗುತ್ತದೆ. ಬಾಲಕಿಯಲ್ಲಿ ಹಣ ಇಲ್ಲ ಎಂದಾದಲ್ಲಿ ಟಿಕೆಟ್ರಹಿತವಾಗಿ ಆಕೆಯ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು ಕಾನೂನುಬಾಹಿರ. ಬಾಲಕಿಯ ಪರವಾಗಿ, ಸಹಪ್ರಯಾಣಿಕರನ್ನು ಹಣ ಒದಗಿಸುವಂತೆ ಕೇಳುವುದು ಅವರ ಕೆಲಸವಲ್ಲ. ಆದರೆ, ಮಾನವೀಯತೆ...? ಅದನ್ನು ಮರೆತಿದ್ದಕ್ಕೆ ಆಗುವ ಅನಾಹುತಕ್ಕೆ ಹೊಣೆ...?