ವಿಜಯಪುರ: ಪಟ್ಟಣದ ಪ್ರವಾಸಿ ಮಂದಿರವನ್ನು ಸೂಕ್ತವಾಗಿ ನಿರ್ವಹಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ದೂರಿದ್ದಾರೆ.
ಪರಿವೀಕ್ಷಣಾ ಮಂದಿರದಲ್ಲಿ ಕೂರಲು ಸರಿಯಾದ ಆಸನ ವ್ಯವಸ್ಥೆ ಇಲ್ಲ. ಗೋಡೆಗಳೆಲ್ಲಾ ಹಾಳಾಗಿ ಬಣ್ಣ ಕಳೆದುಕೊಂಡಿವೆ, ಸೊಳ್ಳೆ, ತಿಗಣೆಗಳ ಆವಾಸ ಸ್ಥಾನವಾಗಿದೆ. ಉದ್ಯಾನ ನೀರು ಕಾಣದೆ ಒಣಗಿದೆ ಎಂದರು.
ಹೊರಗಿನ ಅತಿಥಿಗಳು ಬಂದರೆ ಪರಿವೀಕ್ಷಣಾ ಮಂದಿರಕ್ಕೆ ಕರೆದುಕೊಂಡು ಬರಲು ಬೇಸರವಾಗುತ್ತದೆ. ತಾವು ಶಾಸಕರಿದ್ದಾಗ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿ ಬರುವ ಅತಿಥಿಗಳಿಗೆ ವ್ಯವಸ್ಥಿತವಾದ ಆಸನಗಳ ವ್ಯವಸ್ಥೆಮಾಡಲಾಗಿತ್ತು. ಈಗ ಅತಿಥಿಗಳು ಬಂದರೆ ಕಿತ್ತು ಹೋದ ಆಸನಗಳ ಮೇಲೆ ಕೂರಿಸಬೇಕಾದ ಪರಿಸ್ಥಿತಿಯಿದೆ ಎಂದರು. ಆದಷ್ಟು ಶೀಘ್ರವಾಗಿ ಇಲ್ಲಿನ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಲೋಕೋಪಯೋಗಿ ಇಲಾಖೆ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.