ನವದೆಹಲಿ: ಕೃಷ್ಣಾ ನ್ಯಾಯಮಂಡಳಿ ನದಿ ನೀರು ಹಂಚಿಕೆ ಮಾಡಿರುವ ವಿಧಾನ ಪ್ರಶ್ನಿಸಿ ಕರ್ನಾಟಕ ಸಲ್ಲಿಸಿರುವ ಅರ್ಜಿಯ ಸಂಬಂಧವಾಗಿ ಆಂಧ್ರ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿತು.
ನ್ಯಾ. ಎಸ್.ಜೆ. ಮುಖ್ಯೋಪಾಧ್ಯಾಯ ಹಾಗೂ ನ್ಯಾ. ಪ್ರಫುಲ್ಲಚಂದ್ರ ಪಂತ್ ಅವರನ್ನೊಳಗೊಂಡ ನ್ಯಾಯಪೀಠವು, ಕೃಷ್ಣಾ ನ್ಯಾಯಮಂಡಳಿ 2010 ಹಾಗೂ 2013ರಂದು ನೀಡಿರುವ ಆದೇಶ ಪ್ರಶ್ನಿಸಿ ಆಂಧ್ರಪ್ರದೇಶ ಸಲ್ಲಿಸಿರುವ ಎರಡು ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿತು. ಈ ಅರ್ಜಿಗಳಿಗೆ ಉತ್ತರಿಸುವಂತೆ ನ್ಯಾಯಪೀಠವು ಕರ್ನಾಟಕ ಮತ್ತು ಕೇಂದ್ರ ಸರ್ಕಾರಕ್ಕೆ ಕೇಳಿದೆ.
ಆಂಧ್ರ ಪ್ರದೇಶ ಸರ್ಕಾರವು ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್ನಿಂದ 524.25 ಮೀಟರ್ಗೆ ಎತ್ತರಿಸಲು ಕರ್ನಾಟಕಕ್ಕೆ ಅನುಮತಿ ನೀಡಿರುವ ನ್ಯಾಯ ಮಂಡಳಿ ಆದೇಶವನ್ನು ಪ್ರಶ್ನಿಸಿದೆ. ಕೃಷ್ಣಾ ನ್ಯಾಯಮಂಡಳಿ ಕಳೆದ ವರ್ಷ ನವೆಂಬರ್ 29ರಂದು ತನ್ನ ವ್ಯಾಪ್ತಿ ಮೀರಿ ನದಿ ನೀರು ಹಂಚಿಕೆ ಮಾಡಿದೆ ಎಂದು ಕರ್ನಾಟಕ ಪ್ರತಿಪಾದಿಸಿದೆ.
ಎರಡನೇ ಕೃಷ್ಣಾ ನ್ಯಾಯಮಂಡಳಿಯು ರಾಜ್ಯದ ನೀರಿನ ಪಾಲನ್ನು 911 ಟಿಎಂಸಿ ಅಡಿಯಿಂದ 907 ಟಿಎಂಸಿ ಅಡಿಗೆ ತಗ್ಗಿಸಿರುವುದನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ.
ಆಂಧ್ರ ಹಾಗೂ ಮಹಾರಾಷ್ಟ್ರ ಸರ್ಕಾರವೂ ಈ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿವೆ. ಅಲ್ಲದೆ, ಸರ್ವೋಚ್ಚ ನ್ಯಾಯಾಲಯ ತೀರ್ಪಿನ ವ್ಯಾಪ್ತಿಗೊಳಪಟ್ಟು ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಸೂಚಿಸುವಂತೆ ಮಹಾರಾಷ್ಟ್ರವು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಕರ್ನಾಟಕವೂ ಮಹಾರಾಷ್ಟ್ರ ನಿಲುವನ್ನು ಬೆಂಬಲಿಸಿದೆ. ಕಾವೇರಿ ನದಿ ನೀರಿನ ವಿವಾದ ಸರ್ವೋಚ್ಚ ನ್ಯಾಯಾಲಯದ ಮುಂದಿ-ದ್ದರೂ, ಅಧಿಸೂಚನೆ ಹೊರಡಿಸಲಾಗಿದೆ ಎಂದು ಕರ್ನಾಟಕ ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವಾದಿಸಿದೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಆರು ವಾರಗಳ ಕಾಲ ಮುಂದೂಡಿದೆ.