ಕೋಲಾರ: ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಕುಸಿದ್ದು ಬಿದ್ದಿದ್ದ ಕೊಠಡಿಗಳ ಛಾವಣಿಯ ದುರಸ್ತಿ ಕಾರ್ಯವನ್ನು ನಿರ್ಮಿತಿ ಕೇಂದ್ರವು ಕೈಗೆತ್ತಿಕೊಂಡಿದೆ.
‘ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಕೊಠಡಿಯ ಮೇಲ್ಛಾವಣಿ ಕುಸಿದಿದ್ದ ಸಂಗತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು. ನಂತರ ಜಿಲ್ಲಾಧಿಕಾರಿ ಕೇಂದ್ರದ ಐದೂ ಕೊಠಡಿಗಳ ಛಾವಣಿಯ ದುರಸ್ತಿಗೆ ಆದೇಶ ಹೊರಡಿಸಿದ್ದರು’ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಆಂಜನಪ್ಪ ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರದ ಐದು ಕೊಠಡಿಗಳ ಪೈಕಿ 2 ಕೊಠಡಿಗಳ ಛಾವಣಿಗೆ ಸೀಲಿಂಗ್ ಹಾಕಲಾಗಿದೆ. ಉಳಿದ ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದೆ. ನಿರ್ಮಿತಿ ಕೇಂದ್ರವೇ ಎರಡು ತಿಂಗಳ ಹಿಂದೆಯಷ್ಟೇ ಈ ಕೊಠಡಿಗಳನ್ನು ನಿರ್ಮಿಸಿತ್ತು ಎಂದು ಹೇಳಿದರು.
ಕಾಲೇಜಿನಲ್ಲಿ ಸುಮಾರು 3,200 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದು, ಕೊಠಡಿಗಳ ಸಮಸ್ಯೆ ಇದೆ. ಹೀಗಾಗಿ 10 ಹೊಸ ಕೊಠಡಿಗಳ ನಿರ್ಮಾಣಕ್ಕೆ ₹ 1.50 ಕೋಟಿ ಮಂಜೂರಾಗಿದೆ. ರಾಜ್ಯ ಗೃಹ ಮಂಡಳಿಯು ಕೊಠಡಿಗಳ ಕಾಮಗಾರಿಯ ಗುತ್ತಿಗೆ ಪಡೆದಿದೆ. ಆದರೆ ಜಂಪನ ಕಂಪೆನಿಯವರು ಮಂಡಳಿಯಿಂದ ಉಪಗುತ್ತಿಗೆ ಪಡೆದು ಕಾಮಗಾರಿ ಮುಂದುವರಿಸಿದ್ದಾರೆ. ಆಮೆಗತಿಯಲ್ಲಿ ಸಾಗಿದೆ ಎಂದು ದೂರಿದರು.
ಕಾಮಗಾರಿಯನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಬೇಕೆಂದು ಗುತ್ತಿಗೆ ಷರತ್ತಿನಲ್ಲಿ ತಿಳಿಸಲಾಗಿದೆ. ಆದರೆ, ಎರಡೂವರೆ ವರ್ಷವಾದರೂ ಪೂರ್ಣಗೊಂಡಿಲ್ಲ. ಶೇ 60ರಷ್ಟೂ ಕೆಲಸವಾಗಿಲ್ಲ. ವಿದ್ಯುತ್, ಪೇಂಟಿಂಗ್ ಸೇರಿದಂತೆ ಹಲವು ಕೆಲಸಗಳು ಬಾಕಿ ಉಳಿದಿವೆ ಎಂದು ಆರೋಪಿಸಿದರು.
ಕೊಠಡಿಗಳ ಸಮಸ್ಯೆಯಿಂದಾಗಿ ತರಗತಿಗಳನ್ನು ನಡೆಸಲು ಕಷ್ಟವಾಗಿದೆ. ರಾಜ್ಯ ಗೃಹ ಮಂಡಳಿ ಅಧಿಕಾರಿಗಳ ಹಾಗೂ ಉಪಗುತ್ತಿಗೆ ಪಡೆದಿರುವ ಜಂಪನ ಕಂಪೆನಿಯ ನಿರ್ಲಕ್ಷ್ಯದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.