ನೆಲಮಂಗಲ: ತಾಲ್ಲೂಕಿನ ಜಕ್ಕಸಂದ್ರದಲ್ಲಿರುವ ಆಲೀವ್ ಲೈಫ್ಸೈನ್ಸಸ್ ಕಂಪೆನಿಗೆ ಸೇರಿದ ಆಯುರ್ವೇದಿಕ್ ಉತ್ಪನ್ನಗಳ ಸಂಗ್ರಹದ ಗೋದಾಮಿನಲ್ಲಿ ಸೋಮವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡು ಗೋದಾಮಿನಲ್ಲಿದ್ದ ಉತ್ಪನ್ನಗಳು ಸುಟ್ಟು ಕರಕಲಾಗಿವೆ.
ಮೂರು ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಗೋದಾಮಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದರು.
‘ವಿದೇಶಕ್ಕೆ ರಫ್ತು ಮಾಡುವ ಉತ್ಪನ್ನಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಕಾರ್ಖಾನೆ ಸಹ ಗೋದಾಮಿಗೆ ಹೊಂದಿಕೊಂಡಿ ರುವುದರಿಂದ ಇಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಚಹಾ ವಿರಾಮದಲ್ಲಿ ಬೆಂಕಿ ಆಕಸ್ಮಿಕ ನಡೆದಿದೆ. ಆ ವೇಳೆ ಬಹುತೇಕ ಕಾರ್ಮಿಕರು ಕಾರ್ಖಾನೆಯಿಂದ ಹೊರಗಡೆ ಇದ್ದರು’ ಎಂದು ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ರಮೇಶ್ ತಿಳಿಸಿದರು.
‘ಘಟನೆಯ ವೇಳೆ ಗೋದಾಮು ಮತ್ತು ಕಾರ್ಖಾನೆ ಒಳಗೆ ಇದ್ದ ಕಾರ್ಮಿಕರು ಹೊರಗೆ ಓಡಿ ಬಂದರು. ಹೀಗಾಗಿ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಎಷ್ಟು ಪ್ರಮಾಣದ ನಷ್ಟವಾಗಿದೆ ಎನ್ನುವುದು ಇನ್ನು ತಿಳಿದುಬಂದಿಲ್ಲ’ ಎಂದು ಮಾನವ ಸಂಪನ್ಮೂಲ ಅಧಿಕಾರಿ ಹೇಳಿದರು.