ಬೆಂಗಳೂರು: ರಾಜ್ಯೋತ್ಸವದ ದಿನದಂದು ರಾಜ್ಯದಲ್ಲಿ ಒಟ್ಟು ಆರು ಹೊಸ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರು ನಗರ– ತುಮಕೂರು: ಈ ರೈಲು ಪ್ರತಿದಿನ ಸಂಜೆ 5.30ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 6.50ಕ್ಕೆ ತುಮಕೂರು ತಲುಪುತ್ತದೆ. ಬೆಳಿಗ್ಗೆ 8.15ಕ್ಕೆ ತುಮಕೂರಿನಿಂದ ಹೊರಡುವ ರೈಲು 9.50ಕ್ಕೆ ಬೆಂಗಳೂರು ನಗರ ರೈಲ್ವೆ ನಿಲ್ದಾಣ ತಲುಪುತ್ತದೆ.
ಮಾರ್ಗಮಧ್ಯದಲ್ಲಿ ಯಶವಂತಪುರ, ಚಿಕ್ಕಬಾಣಾವರ, ದೊಡ್ಡಬೆಲೆ ಮತ್ತು ಕ್ಯಾತ್ಸಂದ್ರದಲ್ಲಿ ನಿಲುಗಡೆ ನೀಡಲಾಗುತ್ತದೆ.
ಯಶವಂತಪುರ– ನೆಲಮಂಗಲ: ಈ ರೈಲು ಪ್ರತಿನಿತ್ಯ ಬೆಳಿಗ್ಗೆ 7.30ಕ್ಕೆ ಯಶವಂತಪುರದಿಂದ ಹೊರಟು 8.15ಕ್ಕೆ ನೆಲಮಂಗಲ ತಲುಪುತ್ತದೆ. ಬೆಳಿಗ್ಗೆ 8.45ಕ್ಕೆ ನೆಲಮಂಗಲದಿಂದ ಹೊರಟು 9.40ಕ್ಕೆ ಯಶವಂತಪುರ ತಲುಪುತ್ತದೆ.
ಯಶವಂತಪುರ– ಹೊಸೂರು: ಈ ರೈಲು ಮಧ್ಯಾಹ್ನ 2.55ಕ್ಕೆ ಯಶವಂತಪುರದಿಂದ ಹೊರಟು ಸಂಜೆ 4.30ಕ್ಕೆ ಹೊಸೂರು ತಲು ಪುತ್ತದೆ. ಸಂಜೆ 5.50ಕ್ಕೆ ಹೊಸೂರಿನಿಂದ ಹೊರಟು ರಾತ್ರಿ 7.20ಕ್ಕೆ ಯಶವಂತಪುರ ನಿಲ್ದಾಣಕ್ಕೆ ಬರುತ್ತದೆ. ಮಾರ್ಗಮಧ್ಯದಲ್ಲಿ ಹೆಬ್ಬಾಳ, ಬಾಣಸವಾಡಿ, ಕರ್ಮೇಲರಂ ಮತ್ತು ಆನೇಕಲ್ ರಸ್ತೆ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗುತ್ತದೆ.
ಹುಬ್ಬಳ್ಳಿ–ಮುಂಬೈ: ಹುಬ್ಬಳ್ಳಿ– ಮುಂಬೈ (ಲೋಕಮಾನ್ಯ ತಿಲಕ್ ಟರ್ಮಿನಸ್) ಮತ್ತು ಹುಬ್ಬಳ್ಳಿ– ಬೆಳಗಾವಿ ನಡುವಿನ ರೈಲ್ವೆ ಸಂಚಾರಕ್ಕೆ ಸಂಸದ ಪ್ರಹ್ಲಾದ ಜೋಶಿ ಶನಿವಾರ ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು.ಚಾಮರಾಜನಗರ– ಬೆಂಗ ಳೂರು ನಡುವಿನ ರೈಲು ಸಂಚಾರಕ್ಕೆ ಸಂಸದ ಧ್ರುವನಾರಾಯಣ ಚಾಲನೆ ನೀಡಿದರು.
ಬೆಂಗಳೂರು ಸುತ್ತ ಉಪನಗರ ರೈಲು: ಸದಾನಂದ ಗೌಡ
ಬೆಂಗಳೂರು: ಬೆಂಗಳೂರು ಮತ್ತು ಸುತ್ತಲಿನ ನಗರಗಳ ಜೊತೆ ರೈಲ್ವೆ ಸಂಪರ್ಕ ಜಾಲ ಕಲ್ಪಿಸುವ ಉಪನಗರ ರೈಲು ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮೂರು ಹೊಸ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ಅವರು, ‘ಉಪನಗರ ರೈಲು ಸೇವೆಗೆ ಹೆಚ್ಚಿನ ಬೇಡಿಕೆ ಇದೆ. ಆರಂಭದಲ್ಲಿ ಸುತ್ತಲಿನ ನಗರ ಹಾಗೂ ಪಟ್ಟಣಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗುವುದು. ಎರಡನೆ ಹಂತದಲ್ಲಿ ನಗರದ ಒಳಭಾಗದಲ್ಲಿ ಯೋಜನೆ ಜಾರಿಗೊಳಿ ಸಲಾಗುವುದು’ ಎಂದರು.
ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಉಪನಗರ ರೈಲು ಸೇವೆ ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಬೆಂಗ ಳೂರು– ತುಮಕೂರು, ಯಶವಂತಪುರ– ನೆಲಮಂಗಲ ಮತ್ತು ಯಶವಂತಪುರ– ಹೊಸೂರು ನಡುವೆ ಈಗ ಆರಂಭವಾಗಿರುವ ರೈಲು ಸಂಚಾರ ಕೂಡ ಇದಕ್ಕೆ ಪೂರಕವಾಗಿದೆ. ಇದೇ ರೀತಿ ಇನ್ನಷ್ಟು ಪಟ್ಟಣಗಳಿಗೆ ರೈಲು ಸಂಚಾರ ಆರಂಭಿಸಲಾಗುವುದು. ಇದರಿಂದ ಸಮೀಪದ ನಗರ, ಪಟ್ಟಣಗಳಿಂದ ಬೆಂಗಳೂರಿಗೆ ಬರುವವರು ವಾಹನ ಗಳನ್ನು ಅವಲಂಬಿಸುವುದು ತಪ್ಪುತ್ತದೆ ಎಂದು ಹೇಳಿದರು.
‘ಎಂಟು ತಿಂಗಳಿಗೆ ಸೀಮಿತವಾಗಿ ನಾನು ಮಂಡಿಸಿದ ರೈಲ್ವೆ ಬಜೆಟ್ನಲ್ಲಿ 11 ಹೊಸ ರೈಲುಗಳನ್ನು ಪ್ರಕಟಿಸಿದ್ದೇನೆ. ಈ ಎಲ್ಲ ರೈಲುಗಳ ಸಂಚಾರವನ್ನು ತ್ವರಿತವಾಗಿ ಆರಂಭಿಸಲಾಗುವುದು. ಮೈಸೂರು– ಬೆಂಗಳೂರು ಜೋಡಿ ಮಾರ್ಗದ ಕಾಮಗಾರಿಯನ್ನು 2015ರ ಮಾರ್ಚ್ 31ರೊಳಗೆ ಪೂರ್ಣಗೊಳಿಸಲಾಗು ವುದು. ಹಾಸನ– ಬೆಂಗಳೂರು ನಡುವೆ 2016ರಲ್ಲಿ ರೈಲು ಸಂಚಾರ ಆರಂಭಿಸಲಾಗುವುದು. ಮಂಗಳೂರು– ಬೆಂಗಳೂರು ನಡುವೆ ಹಗಲು ರೈಲು ಸಂಚಾರಕ್ಕೆ ಶೀಘ್ರದಲ್ಲಿ ಚಾಲನೆ ನೀಡಲಾ ಗುವುದು’ ಎಂದರು. ಚಿಕ್ಕಮಗಳೂರು– ಬೆಂಗಳೂರು ನಡುವಿನ ಹೊಸ ರೈಲು ಸಂಚಾರಕ್ಕೆ ಮಂಗಳವಾರ ಚಾಲನೆ ನೀಡಲಾಗುವುದು. ಹರಿಹರ– ಯಶವಂತಪುರ ಹೊಸ ರೈಲು ಸಂಚಾರಕ್ಕೆ ನ.7ರಂದು ಚಾಲನೆ ನೀಡಲಾಗುವುದು ಎಂದು ವಿವರ ನೀಡಿದರು.
ವಿದ್ಯುತ್ಜಾಲ ನಿರ್ಮಿಸಿ: ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಅನಂತಕುಮಾರ್ ಮಾತನಾಡಿ, ‘ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರೈಲ್ವೆ ಮಾರ್ಗಗಳಿಗೆ ವಿದ್ಯುತ್ ಪೂರೈಸುವ ವಿದ್ಯುತ್ ಜಾಲಗಳಿವೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ವಿದ್ಯುತ್ ಜಾಲ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.