ಬೆಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ (ಆರ್ಟಿಐ) ಲಿಂಗರಾಜು ಕೊಲೆ ಪ್ರಕರಣ ಸಂಬಂಧ ದೂರು ಹಿಂಪಡೆಯುವಂತೆ ಮೃತರ ಕುಟುಂಬಕ್ಕೆ ಆಮಿಷವೊಡ್ಡಿದ ಕಾರಣಕ್ಕೆ ಬಿಬಿಎಂಪಿ ಸದಸ್ಯೆ ಗೌರಮ್ಮ ಅವರ ಪತಿ ಗೋವಿಂದರಾಜು ಮತ್ತು ಪ್ರಕರಣದ ಇತರೆ ಆರೋಪಿಗಳಿಗೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಕಲಬುರ್ಗಿ ಜೈಲಿಗೆ ಕಮಾನು (ಸ್ಥಳಾಂತರಿಸುವುದು) ಎತ್ತಲಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಗೋವಿಂದರಾಜು ಅವರು ಅನಾರೋಗ್ಯದ ಕಾರಣಕ್ಕೆ ನ್ಯಾಯಾಲಯದಿಂದ ಅನುಮತಿ ಪಡೆದು ಆಸ್ಪತ್ರೆಗೆ ದಾಖಲಾಗಿದ್ದಾಗ ಲಿಂಗರಾಜು ಅವರ ಮಗನನ್ನು ಆಸ್ಪತ್ರೆಯಲ್ಲೇ ಹಲವು ಬಾರಿ ಭೇಟಿಯಾಗಿ ದೂರು ಹಿಂಪಡೆಯುವಂತೆ ಹಣ ಮತ್ತು ನಿವೇಶನದ ಆಮಿಷವೊಡ್ದಿದ್ದರು.
ಅಲ್ಲದೇ, ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ಜೈಲಿಗೆ ಹಿಂದಿರುಗುವಾಗ ವಾಹನದ ಭದ್ರತಾ ಸಿಬ್ಬಂದಿಗೆ ಲಂಚ ಕೊಟ್ಟು ಮಾರ್ಗಮಧ್ಯೆ ಲಿಂಗರಾಜು ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರನ್ನು ಭೇಟಿಯಾಗಿದ್ದರು. ಈ ಸಂಗತಿ ಸುದ್ದಿವಾಹಿನಿಯೊಂದು ಇತ್ತೀಚೆಗೆ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿತ್ತು.
‘ಗೋವಿಂದರಾಜು ಅವರು ಆಸ್ಪತ್ರೆಯಲ್ಲಿದ್ದಾಗ ಲಿಂಗರಾಜು ಕುಟುಂಬ ಸದಸ್ಯರನ್ನು ಭೇಟಿಯಾಗಿ ರಾಜಿ ಮಾಡಿಕೊಳ್ಳಲು ಯತ್ನಿಸಿರುವುದು ಗೊತ್ತಾಗಿದೆ. ಜತೆಗೆ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ. ಆದ ಕಾರಣ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ’ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
‘ಗೋವಿಂದರಾಜು ಹಾಗೂ ಪ್ರಕರಣದ ಇತರೆ ಆರೋಪಿಗಳನ್ನು ಬೇರೊಂದು ಜೈಲಿಗೆ ಸ್ಥಳಾಂತರಿಸುವಂತೆ ಎಡಿಜಿಪಿ ಕೆ.ವಿ.ಗಗನ್ದೀಪ್ ನಾಲ್ಕು ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಅವರ ಆದೇಶದಂತೆ ಶನಿವಾರ ಮಧ್ಯಾಹ್ನ ಗೋವಿಂದರಾಜು, ವೇಲು, ಶಂಕರ ಅಲಿಯಾಸ್ ಗುಂಡ, ರಂಗಸ್ವಾಮಿ, ಉಮಾಶಂಕರ್, ರಾಘವೇಂದ್ರ ಮತ್ತು ಶಂಕರ್ನನ್ನು ಕಲಬುರ್ಗಿ ಜೈಲಿಗೆ ಕಳುಹಿಸಲಾಗಿದೆ’ ಎಂದು ಕಾರಾಗೃಹ ಇಲಾಖೆ ಡಿಐಜಿ ಜಯಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.
2012ರ ನ.20ರಂದು ಚಾಮರಾಜಪೇಟೆ ಸಮೀಪದ ವಿಠ್ಠಲನಗರದಲ್ಲಿ ಲಿಂಗರಾಜು ಅವರನ್ನು ಮನೆಯ ಬಳಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಬಳಿಕ ಚಾಮರಾಜಪೇಟೆ ಪೊಲೀಸರು ಪಾಲಿಕೆಯ ಆಜಾದ್ನಗರ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಗೌರಮ್ಮ, ಅವರ ಪತಿ ಗೋವಿಂದರಾಜು ಹಾಗೂ ಇತರೆ ಆರೋಪಿಗಳನ್ನು ಬಂಧಿಸಿದ್ದರು. ನಂತರ ಗೌರಮ್ಮ ಅವರು 2013ರ ಏಪ್ರಿಲ್ನಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳು, ‘ಲಿಂಗರಾಜು ಅವರು ಗೌರಮ್ಮ ದಂಪತಿ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪ ಹೊರಿಸಿ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇ ಅವರ ಕೊಲೆಗೆ ಮುಖ್ಯ ಕಾರಣ’ ಎಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.