ಬೆಂಗಳೂರು: ‘ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅದ್ಭುತ ಕಲಾವಿದರೂ ಹೌದು’ ಎಂದು ಹಿರಿಯ ಕಲಾವಿದ ಎಸ್.ಜಿ.ವಾಸುದೇವ ಬಣ್ಣಿಸಿದರು.
ಇತ್ತೀಚೆಗೆ ನಿಧನರಾದ ಆರ್.ಕೆ. ಲಕ್ಷ್ಮಣ್ ಅವರಿಗೆ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ಅವರ ವ್ಯಂಗ್ಯಚಿತ್ರಗಳಿಂದ ನಾನು ಸಾಕಷ್ಟು ಪ್ರಭಾವಿತನಾಗಿದ್ದೇನೆ. ಪತ್ರಿಕಾ ಕ್ಷೇತ್ರದಲ್ಲಿನ ಅವರ ಅಪ್ರತಿಮ ಸಾಧನೆ ಚಿರಕಾಲ ಉಳಿಯುವಂತಹುದು’ ಎಂದರು.
ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಮಾತನಾಡಿ, ‘ಲಕ್ಷ್ಮಣ್ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಅವರು ಪೂರ್ಣ ಜೀವನ ನಡೆಸಿದ್ದಾರೆ. ಅವರ ಸಾಧನೆ ವಿಸ್ಮಯ ಮೂಡಿಸುವಂತಹುದು’ ಎಂದರು.
ಮಾಯಾ ಕಾಮತ್ ಸ್ಮಾರಕ ಸ್ಪರ್ಧೆಯ ಟ್ರಸ್ಟಿ ಅಮರನಾಥ ಕಾಮತ್ ಮಾತನಾಡಿ, ‘ಲಕ್ಷ್ಮಣ್ ಅವರ ಕುಂಚ ಯಾರ ಮೇಲೂ ಕನಿಕರ ತೋರಿಸಲಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮೇಲೆ ಅವರು ನಿರ್ದಾಕ್ಷಿಣ್ಯ ಟೀಕೆ ಮಾಡಿದ್ದರು’ ಎಂದರು.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ.ನರೇಂದ್ರ ಮಾತನಾಡಿ, ‘ಸಂಸ್ಥೆಯ ವತಿಯಿಂದ ಲಕ್ಷ್ಮಣ್ ಅವರ ನಾಲ್ಕು ವ್ಯಂಗ್ಯಚಿತ್ರ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. 2009ರಲ್ಲಿ ನಡೆದ ಪ್ರದರ್ಶನದಲ್ಲಿ ಲಕ್ಷ್ಮಣ್ ಅವರು ಭಾಗವಹಿಸಿದ್ದರು’ ಎಂದರು.