ಚಿಕ್ಕಬಳ್ಳಾಪುರ: ತಾಲ್ಲೂಕಿನ ಕೆಲ ಭಾಗಗಳಲ್ಲಿ ಆಲೂಗಡ್ಡೆ ಬೆಳೆಗೆ ಹಾನಿಯಾಗಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆ ತಜ್ಞರು ಗುರುವಾರ ಗವಿಗಾನಹಳ್ಳಿ ಮತ್ತು ವರದಹಳ್ಳಿಯ ಆಲೂಗಡ್ಡೆ ಬೆಳೆದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಿತ್ತನೆ ಬೀಜ, ಬೆಳೆಯನ್ನು ಪರೀಕ್ಷಿಸಿದ ಅವರು ಆಲೂಗಡ್ಡೆ ಬೆಳೆಗಾರರ ಅಹವಾಲುಗಳನ್ನು ಆಲಿಸಿ, ಅಗತ್ಯ ಮಾಹಿತಿ ಸಂಗ್ರಹಿಸಿದರು.
ಆಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಬಿತ್ತನೆ ಮಾಡಿದರೂ ಈವರೆಗೆ ಗಿಡ ಬೆಳೆದಿದೆಯೇ ಹೊರತು ಆಲೂಗಡ್ಡೆಯ ಗಡ್ಡೆ ಬಲಿತಿಲ್ಲ. ₨ 40 ಸಾವಿರಕ್ಕೂ ಹೆಚ್ಚು ಸಾಲ ಮಾಡಿ ಆಲೂಗಡ್ಡೆ ಬಿತ್ತನೆ ಮಾಡಿದ್ದ ನಾವು ಒಳ್ಳೆಯ ಬೆಳೆ ಬರುವುದೆಂಬ ನಿರೀಕ್ಷೆಯಲ್ಲಿದ್ದವು. ಬಿತ್ತನೆ ಬೀಜದಲ್ಲಿ ದೋಷವಿದೆಯೇ ಹೊರತು ನಮ್ಮ ಕೃಷಿ ಪದ್ಧತಿಯಲ್ಲಿ ಯಾವುದೇ ತಪ್ಪಿಲ್ಲ. ಇದೆಲ್ಲವನ್ನೂ ನೀವೇ ಸರಿಪಡಿಸಬೇಕು ಎಂದು ರೈತರು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ತಜ್ಞ ಡಾ.ಅಮರ ನಂಜುಂಡೇಶ್ವರ ಮಾತನಾಡಿ, ಆಲೂಗಡ್ಡೆ ಬೆಳೆಯನ್ನು ಸಾಮಾನ್ಯವಾಗಿ ನವೆಂಬರ್ನಿಂದ ಜನವರಿ ಅವಧಿಯಲ್ಲಿ ಬಿತ್ತನೆ ಮಾಡಿ ಬೆಳೆಯಲಾಗುತ್ತದೆ. ಬಿಸಿಲಿನಲ್ಲಿ ಯಾವುದೇ ಕಾರಣಕ್ಕೂ ಬೆಳೆಯಲಾಗದ ಈ ಬೆಳೆಗೆ ತೇವಾಂಶ ಮತ್ತು ಮಂಜಿನ ವಾತಾವರಣ ಬೇಕು. ಬಿಸಿಲಿದ್ದಷ್ಟೂ ಬೆಳೆಗೆ ಹೆಚ್ಚು ಅಪಾಯ ಎಂದರು.
18 ರಿಂದ 20 ಸೆಂಟಿಗ್ರೇಡ್ನಷ್ಟು ಉಷ್ಣಾಂಶ ಇದ್ದ ಆಗಸ್ಟ್– ಅಕ್ಟೋಬರ್ ಅವಧಿಯಲ್ಲಿ ಬಿತ್ತನೆ ಮಾಡಿರುವುದರಿಂದಲೇ ಆಲೂಗಡ್ಡೆ ಸರಿಯಾಗಿ ಬೆಳೆದಿಲ್ಲ. ಹಾನಿಯಾಗಿರುವ ಬೆಳೆಯನ್ನು ಮತ್ತೊಮ್ಮೆ ಪರೀಕ್ಷಿಸಿ ವರದಿ ನೀಡಲಾಗುವುದು. ಇದರ ಬಗ್ಗೆ ಮಾಹಿತಿ ಕೊಡಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನಮ್ಮ ಹಿರಿಯರ ಕಾಲದಿಂದಲೂ ಆಗಸ್ಟ್–ಸೆಪ್ಟೆಂಬರ್ನಲ್ಲಿ ಆಲೂಗಡ್ಡೆ ಬಿತ್ತನೆ ಮಾಡುತ್ತಿದ್ದೆವು. ಆಗ ಇರದ ದೋಷ ಈಗ ಹೇಗೆ ಒಮ್ಮೆಲೇ ಕಾಣಿಸಿಕೊಂಡಿತು. ಬಿತ್ತನೆ ಬೀಜದಲ್ಲಿ ದೋಷವಿದೆ. ಅದನ್ನು ಪರೀಕ್ಷಿಸಬೇಕು. ಬೆಳೆಗೆ ಹಾನಿಯಾದ ಹಿನ್ನೆಲೆಯಲ್ಲಿ ಆಲೂಗಡ್ಡೆ ಬೆಳೆಗಾರರಿಗೆ ಪರಿಹಾರ ಧನ ನೀಡಬೇಕು ಎಂದರು.
ತೋಟಗಾರಿಕೆ ತಜ್ಞರಾದ ಡಾ. ಮಂಜುನಾಥ ರೆಡ್ಡಿ, ಡಾ. ದೊಡ್ಡಬಸಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ, ರೈತ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಮಂಚನಬಲೆ ಕೆ.ಶ್ರೀನಿವಾಸ್, ಅಂಗರೇಖನಹಳ್ಳಿ ರವಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.