ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಮತ್ತು ಜನನುಡಿಗಳ ಸೆಣಸಾಟದ ಕಥನಗಳು

ವಿಮರ್ಶೆ
Last Updated 21 ಮೇ 2016, 19:51 IST
ಅಕ್ಷರ ಗಾತ್ರ

ತೆಂಕಣದ ನುಡಿಗಳು ಮತ್ತು ಇಂಗ್ಲಿಷ್
ಸಂ:
ಡಾ. ಮೇಟಿ ಮಲ್ಲಿಕಾರ್ಜುನ,
ಪ್ರ: ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

‘ನಿನ್ನ ಕಣ್ಣೀರು ನನ್ನ ಕಣ್ಣೀರು / ಕಣ್ಣೀರ ಹಿಂದಿನ ಕಥೆಯೂ ಒಂದೇ / ಒಂಟಿಯಾಗಿ ಕಣ್ಣೀರಿಡುವ / ನನ್ನ ಚಿಕ್ಕ ತಂಗ್ಯಮ್ಮ’ ಎಂಬ ಮಹಿಳಾ ಹೋರಾಟದ ಹಾಡಿದೆ. ಇದು ಒಂದು ಹೆಣ್ಣು ಮತ್ತೊಂದು ಹೆಣ್ಣಿಗೆ ಸಮಾಧಾನ ಹೇಳುವ ಧಾಟಿಯಲ್ಲಿದೆ. ಇಲ್ಲಿ ಸಾಂತ್ವನ ಹೇಳುವ ಮತ್ತು ಕೇಳಿಸಿಕೊಳ್ಳುವ ಇಬ್ಬರೂ ಹೆಣ್ಣುಗಳು ಒಂದೇ ಬಗೆಯ ಕಾರಣಗಳಿಂದ ನೋವಿಗೆ ಒಳಗಾಗಿರುವ ಇಂಗಿತವಿದೆ.

ಇಬ್ಬರ ನೋವಿನ ನೆಲೆ ಸ್ಥಾಯಿಯಾಗಿದ್ದು ಸಮಾನವಾಗಿರುವುದು ಹಾಗೂ ನಮ್ಮ ದೇಶದ, ಇಡೀ ಜಗತ್ತಿನ ಎಲ್ಲ ಮಹಿಳೆಯರ ಸಂಕಟದ ನೆಲೆಯು ಒಂದೇ ಆಗಿರುವುದು ತಿಳಿಯುತ್ತದೆ. ಇದರಲ್ಲಿ ಕೊಂಚ ಏರುಪೇರಿದ್ದರೂ ಒಟ್ಟಾರೆ ಮಹಿಳೆಯರ ನೋವಿನ, ಅವರ ಮೇಲಿನ ಹಿಂಸೆಯ ನೆಲೆಗಳು ಒಂದೇ ಆಗಿರುವುದನ್ನು ಮೇಲಿನ ಹಾಡು ತಿಳಿಸುತ್ತದೆ.      
 
ಇದು ಮಹಿಳೆಯರ ವಿಚಾರದಲ್ಲಿ ಎಷ್ಟು ನಿಜವೋ ಭಾರತೀಯ ಮತ್ತು ಆಫ್ರಿಕಾದ ಜನಭಾಷೆಗಳ ವಿಚಾರದಲ್ಲಿಯೂ ಅಷ್ಟೇ ನಿಜ. ಹೆಣ್ಣಿನ ಕಣ್ಣೀರಿನ ಹಿಂದಿನ ಕಾರಣಗಳ ಕಥೆ ಒಂದೇ ಆಗಿರುವಂತೆ, ಇಂಗ್ಲಿಷ್ ಎದುರು ಸೆಣಸಾಡುತ್ತಿರುವ ಎಲ್ಲ ಜನಭಾಷೆಗಳ ಕಣ್ಣೀರಿನ ಕಥೆಯೂ ಒಂದೇ ಆಗಿದೆ. ಹಾಗೆ ಒಂದೇ ಆಗಿರುವುದನ್ನು ಇದುವರೆಗೆ ನಡೆದಿರುವ ಹಲವು ಅಧ್ಯಯನಗಳೂ ತೋರಿಸಿಕೊಟ್ಟಿವೆ.

ಅಂತಹ ಅಧ್ಯಯನಗಳ ಕುರುಹಾಗಿ ಡಾ. ಮೇಟಿ ಮಲ್ಲಿಕಾರ್ಜುನ ಸಂಪಾದಿಸಿ, ‘ಕುವೆಂಪು ಭಾಷಾಭಾರತಿ ಪ್ರಾಧಿಕಾರ’ವು ಹೊರತಂದಿರುವ ‘ತೆಂಕಣದ ನುಡಿಗಳು ಮತ್ತು ಇಂಗ್ಲಿಷ್’ ಕೃತಿಯನ್ನು ಗಮನಿಸಬಹುದು.

ಇದು ತೆಂಕಣ ಭಾರತದ ನುಡಿಗಳನ್ನು ಒಳಗೊಂಡಂತೆ ಇಡೀ ಭಾರತದ ಎಲ್ಲ ನುಡಿಗಳು ಇಂಗ್ಲಿಷ್ ಎದುರು ನರಳುವ ಕಥೆಯನ್ನು ತೆರೆದಿಡುತ್ತಿದೆ. ಹೆಣ್ಣು, ಹೆಣ್ಣಿನ ನುಡಿಯು ತುಳಿತಕ್ಕೆ ಒಳಗಾದಂತೆ ಜನಸಮುದಾಯಗಳ ನುಡಿಗಳು  ತುಳಿತಕ್ಕೆ ಒಳಗಾಗಿರುವುದನ್ನು ಈ ಕೃತಿ ತೋರಿಸಿಕೊಟ್ಟಿದೆ.

ತೆಂಕಣ ಭಾರತದ ನುಡಿಗಳು ಇಂಗ್ಲಿಷ್‌ನ ಪ್ರಾಬಲ್ಯದಿಂದ ಎದುರಿಸುತ್ತಿರುವ ಸವಾಲುಗಳನ್ನು ಚಾರಿತ್ರಿಕವಾಗಿ ಪರಿಶೀಲಿಸಿರುವ ಈ ಪುಸ್ತಕ, ಮುಖ್ಯವಾಗಿ ಇಂಗ್ಲಿಷ್‌ನ ಎದುರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷೆಗಳು ಎದುರಿಸುತ್ತಿರುವ ಸವಾಲುಗಳನ್ನು ನಿರೂಪಿಸುವ ಕೆಲಸ ಮಾಡಿದೆ. ಇಂಗ್ಲಿಷ್ ಎದುರು ದೇಸೀನುಡಿಗಳು ಸೊರಗಿರುವ, ಸೆಣೆಸಿರುವ ಮತ್ತು ಹೊಂದಾಣಿಕೆ ಮಾಡಿಕೊಂಡಿರುವ ಬಗೆಗಳನ್ನು ಗುರುತಿಸಿದೆ.

ಕನ್ನಡದ ಆತಂಕಗಳ ಬಗೆಗೆ ಕೆ.ವಿ. ನಾರಾಯಣ, ಮೇಟಿ ಮಲ್ಲಿಕಾರ್ಜುನ, ಕಿರಣ್ ಕುಮಾರ್, ತಮಿಳಿನ ಬಗೆಗೆ ಖ್ಯಾತ ಭಾಷಾವಿಜ್ಞಾನಿಗಳಾದ ಇ. ಅಣ್ಣಾಮಲೈ, ಎಲ್. ರಾಮಮೂರ್ತಿ, ತುಳು ಬಗೆಗೆ ದುರ್ಗಾಪ್ರವೀಣ್, ತೆಲುಗು ಬಗೆಗೆ ಗಾರಪಾಟಿ ಉಮಾಮಹೇಶ್ವರ್ ರಾವ್, ಅಯಿನವೋಲು ಉಷಾದೇವಿ, ಮಲಯಾಳಂ ಬಗೆಗೆ ಎ. ಶ್ರೀಕುಮಾರ್ ಮತ್ತು ಎ.ಪಿ. ಆಂಡ್ರ್ಯೂಕುಟಿ ಲೇಖನಗಳನ್ನು ಬರೆದಿದ್ದಾರೆ.

ತೆಂಕಣ ಭಾರತದ ನುಡಿಗಳು ಇಂಗ್ಲಿಷ್‌ನ ಜೊತೆಗೆ ನಡೆಸಿರುವ ಸೆಣಸಾಟದ ನಂಟನ್ನು ಶೋಧಿಸುವ ಆಶಯವನ್ನು ಇಟ್ಟುಕೊಂಡೇ ವಸಾಹತುಶಾಹಿ ಭಾಷಾ ರಾಜಕಾರಣದ ಹಲವು ಮಗ್ಗುಲುಗಳನ್ನು ಈ ಕೃತಿ ಗುರುತಿಸಿದೆ. ಇದರಿಂದ ಕಳೆದ ಇನ್ನೂರು ವರ್ಷಗಳಲ್ಲಿ ಭಾರತದಲ್ಲಿ ಇಂಗ್ಲಿಷ್ ನುಡಿಯಾಗಿ ಬೆಳೆಯದೆ, ಅದು ವಸಾಹತುಶಾಹಿ ರಾಜಕಾರಣದ ಒಂದು ಆಯುಧವಾಗಿ ಬೆಳೆದು ಬಂದಿರುವುದು ತಿಳಿಯುತ್ತದೆ.

ಈ ದೃಷ್ಟಿಯಿಂದ ನೋಡಿದರೆ ಭಾರತದ ಯಾವುದೇ ನುಡಿ ಎದುರಿಸುತ್ತಿರುವ ಸವಾಲನ್ನು ಕುರಿತು ಅಧ್ಯಯನ ನಡೆಸಿದರೆ ಸಾಕು; ಅದು ಇತರೆ ನುಡಿಗಳಿಗೂ ಸಮನಾಗಿ ಹೊಂದಿಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಭಾರತೀಯ ಭಾಷೆಗಳ ಸವಾಲು – ಸಮಸ್ಯೆಗಳು ಸಮನಾಗಿವೆ. ಇಂದಿನ ಮಾರುಕಟ್ಟೆ ಕೇಂದ್ರಿತ ಜಾಗತೀಕರಣದ ಪ್ರಬಲ ಆಯುಧವಾಗಿ ಇಂಗ್ಲಿಷ್ ಮುಂದುವರೆದಿದೆ.

ವಸಾಹತುಶಾಹಿ ಭಾರತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಆರಂಭದ ದಿನಗಳಲ್ಲಿ ವಿದೇಶಿ ವಿದ್ವಾಂಸರು ದೇಸೀನುಡಿಗಳ ಬೆಳವಣಿಗೆಗೆ ನೆರವಾಗಿದ್ದಾರೆ. ಇದು ವಸಾಹತುಶಾಹಿಯು ಸ್ಥಳೀಯ ಸಮುದಾಯಗಳನ್ನು ಅರಿತು ಅವುಗಳನ್ನು ನಿಯಂತ್ರಿಸುವ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡಿರುವ ಸಂಗತಿಯನ್ನು ಇಲ್ಲಿನ ಲೇಖನಗಳು ತಿಳಿಸುತ್ತವೆ. ವಿದೇಶಿ ವಿದ್ವಾಂಸರು ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿರುವುದು ದಿಟವಾದರೂ ವಸಾಹತುಶಾಹಿ ಭಾಷಿಕ ರಾಜಕಾರಣ ಅದನ್ನು ಸಂಶಯಿಸುವಂತೆ ಮಾಡುತ್ತದೆ.

ಜಾಗತೀಕರಣದ ಈ ದಿನಗಳಲ್ಲಿ ಲಾಭದಾಹಿ ಮಾರುಕಟ್ಟೆಯ ಪ್ರಾಬಲ್ಯವು ತನ್ನ ಸಂವಹನದ ಭಾಷೆಯಾದ ಇಂಗ್ಲಿಷ್‌ನ ಪ್ರಭಾವವನ್ನು ವ್ಯಾಪಕವಾಗಿ ಹೆಚ್ಚಿಸಿರುವುದನ್ನು ಗಮನಿಸಬೇಕು. ಇತರೆ ಅನುಭೋಗಿ ಸರಕುಗಳ ಬೇಡಿಕೆಯನ್ನು ಹೆಚ್ಚಿಸಿದಂತೆ ಇಂಗ್ಲಿಷ್‌ ಅನ್ನೂ ಒಂದು ಸರಕಾಗಿಸಿ ಅದರ ಬೇಡಿಕೆಯನ್ನು ಹೆಚ್ಚಿಸಿರುವ ತಂತ್ರ ಇಲ್ಲಿಯದು. ವಸಾಹತುಶಾಹಿಯ ಕಾಲದಲ್ಲಿ ಇಂಗ್ಲಿಷ್‌ಗೆ ಇದ್ದ ಬೇಡಿಕೆಗಿಂತ ಹೆಚ್ಚು ಬೇಡಿಕೆ ಪ್ರಸ್ತುತ ಸೃಷ್ಟಿಯಾಗಿದೆ.

ಅಂದು ಸಮುದಾಯದ ಕೆಲವರು ಇಂಗ್ಲಿಷ್ ಕಲಿಕೆಯ ಬಗೆಗೆ ಆಸಕ್ತಿ ತೋರಿಸುತ್ತಿದ್ದರೆ, ಇಂದು ದೇಶದ ಬಹುಸಂಖ್ಯಾತ ಸಮಾಜವೇ ಇಂಗ್ಲಿಷ್ ಕಲಿಕೆಯ ಬೇಡಿಕೆಯನ್ನು ಮುಂದಿಡುತ್ತಿದೆ. ‘ಇಎಲ್‌ಟಿ’ಯಂತಹ ಕೋರ್ಸುಗಳ ವಹಿವಾಟು ಹಲವು ಬಿಲಿಯನ್‌ಗಳ ಮೊತ್ತವನ್ನು ದಾಟಿದೆ. ಇಂತಹ ಬೇಡಿಕೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಕಂಡುಬರುವುದನ್ನು ಕೃತಿಯು ತೆರೆದಿಟ್ಟಿದೆ.

ಇದುವರೆಗೂ ಯಾವುದನ್ನು ಕನ್ನಡದ ಸಮಸ್ಯೆ ಮಾತ್ರವೆಂದು ಚರ್ಚಿಸಲಾಗುತ್ತಿತ್ತೋ ಅದನ್ನು ಈ ಕೃತಿಯು ಸುಳ್ಳಾಗಿಸುತ್ತದೆ. ಬದಲಿಗೆ ಕನ್ನಡದಂತೆಯೇ ತೆಂಕಣದ ನುಡಿಗಳು ಅದೇ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ನುಡಿಗಳೂ ಒಂದೇ ಬಗೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಜಾಗತಿಕ ಮಾರುಕಟ್ಟೆ ಹೇರಿರುವ ಒತ್ತಡವು ಕನ್ನಡದ ಮೇಲೆ ಮಾತ್ರವಲ್ಲದೆ ಎಲ್ಲ ನುಡಿಗಳ ಮೇಲೂ ಬಿದ್ದಿದೆ.

ಇದರಿಂದ ಬಿಡುಗಡೆಗೊಳ್ಳುವ ಸುಲಭದ ದಾರಿಗಳೂ ಇಲ್ಲದೆ ಪರದಾಡುತ್ತಿರುವುದು  ಎಲ್ಲ ಭಾರತೀಯ ಭಾಷೆಗಳ ವಿಚಾರದಲ್ಲಿಯೂ ದಿಟವಾಗಿದೆ. ಇದುವರೆಗೂ ತಮಿಳರ ‘ತಮಿಳು ಅಭಿಮಾನ’ದ ಮಿಥ್‌ ಬಗೆಗೆ ಹೇರಳವಾಗಿ ಮಾತನಾಡಿದರೂ ಇಂದು ತಮಿಳು ಮಾಧ್ಯಮ ಶಾಲೆಗಳಿಗಿಂತ ಹೆಚ್ಚು ಇಂಗ್ಲಿಷ್ ಮಾಧ್ಯಮ ಶಾಲೆಗಳು ತಮಿಳುನಾಡಿನಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವುದನ್ನು ಮರೆಯುವಂತಿಲ್ಲ.

ಜಾಗತೀಕರಣದ ಈ ದಿನಗಳಲ್ಲಿ ತಮಿಳರ ಭಾಷಾ ಅಭಿಮಾನವು ಕುಸಿಯುತ್ತಿರುವುದು ಸುಳ್ಳಲ್ಲ. ಇದು ನುಡಿ ಮತ್ತು ರಾಷ್ಟ್ರೀಯತೆಯ ಚಿಂತನೆಗಳು ಸಿಡಿದುಹೋಗಲು ಕಾರಣವಾಗಿರುವುದನ್ನು ಕೃತಿ ಸೂಚ್ಯವಾಗಿ ತಿಳಿಸುತ್ತವೆ.

ಸಮುದಾಯಗಳ ನುಡಿಯ ಮೇಲಿನ ಅಭಿಮಾನವು ಕುಸಿದಿರುವ ಹೊತ್ತಿನಲ್ಲಿ, ಇತರೆ ಸರಕುಗಳಂತೆಯೇ ಇಂಗ್ಲಿಷ್‌ ಅನ್ನು ಖರೀದಿಸದಿದ್ದರೆ ವ್ಯಕ್ತಿ ಮತ್ತು ಸಮಾಜ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ; ಇಂಗ್ಲಿಷ್ ಕಲಿಯದಿರುವುದು ಎಲ್ಲ ಬಗೆಯ ಹಿಂದುಳಿವಿಕೆಗೆ ಕಾರಣವಾಗುತ್ತದೆ ಎಂಬ ಭೀತಿ ಸಮಾಜದಲ್ಲಿದೆ.

ಈ ಭೀತಿಯ ಪರಿಣಾಮವಾಗಿ ಕೆಲವು ಸಾವಿರ ಜನರು ಮಾತನಾಡುವ ನುಡಿಗಳಿಂದ ಹಿಡಿದು ಹಲವು ಕೋಟಿ ಜನರು ಮಾತನಾಡುವ ಕನ್ನಡ, ತಮಿಳು, ತೆಲುಗು, ಬಂಗಾಳಿ, ಸ್ವಾಹಿಲಿ, ಗೀಕೂಯುನಂತಹ ಭಾಷೆಗಳನ್ನು ಬಳಸುವ ನುಡಿಸಮುದಾಯಗಳು ತೀವ್ರ ಆತಂಕವನ್ನು ಎದುರಿಸುವಂತಾಗಿದೆ. ತಮ್ಮ ಭಾಷೆಗಳು ಮುಂದಿನ ದಿನಗಳಲ್ಲಿ ನಶಿಸಿಹೋಗಬಹುದು ಎಂದು ಒಂದು ವರ್ಗ ಆತಂಕಗೊಳ್ಳುವಷ್ಟರ ಮಟ್ಟಿಗೆ ಈ ಸಂಕಟ ತೀವ್ರವಾಗಿದೆ.

ಇಂಗ್ಲಿಷ್‌ನ ವರ್ಗಸ್ವಭಾವ, ಇಂಗ್ಲಿಷ್ ಭಾಷಾಬೋಧನೆಯಲ್ಲಿರುವ ದೋಷಗಳು, ಇಂಗ್ಲಿಷ್‌ ಅನ್ನು ಕಲಿಸಲು ತಾಯ್ನುಡಿಗಳ ಅಗತ್ಯ ನೆರವು. ಎಲ್ಲರಿಗೂ ಇಂಗ್ಲಿಷ್‌ ಕಲಿಸಲು ಬೇಕಾದ ಸಂಪನ್ಮೂಲವೇ ದೇಶದಲ್ಲಿ ಇಲ್ಲದಿರುವುದು, ತರಗತಿಗಳಲ್ಲಿ ದ್ವಿಭಾಷಾ ಬೋಧನಾ ವಿಧಾನದ ಅಳವಡಿಕೆಯ ಅಗತ್ಯ, ಇಂಗ್ಲಿಷ್‌ನ ಭಾರತೀಕರಣದ ಚರ್ಚೆಗಳ ಮುಖಾಮುಖಿ– ಹೀಗೆ ಹಲವು ಸಂಗತಿಗಳ ಚರ್ಚೆ ಪ್ರಸಕ್ತ ಕೃತಿಯಲ್ಲಿದೆ. ಜನಭಾಷೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗೆಗೆ ತಿಳಿಯಲು ಬಯಸುವವರಿಗೆ ಅಗತ್ಯ ನೆರವು ನೀಡುವ ಕೃತಿಯಿದು.

ಕೊನೆಗೆ ಒಂದು ಮಾತು. ಒಟ್ಟಾರೆ ಕೃತಿಯನ್ನು ಅವಲೋಕಿಸಿದಾಗ, ಕೃತಿ ಸಂಯೋಜನೆಗೆ ಇರಿಸಿಕೊಂಡ ವಿಧಾನದ ಪರಿಣಾಮವಾಗಿ ವಿಚಾರಗಳ ಪುನರಾವರ್ತನೆ ಪುಸ್ತಕದಲ್ಲಿದೆ. ಒಂದೇ ಬಗೆಯ ಕೇಳ್ವಿಗಳೊಂದಿಗೆ ಎಲ್ಲ ತೆಂಕಣ ನುಡಿಗಳ ಸಮಸ್ಯೆಗಳನ್ನು ಪರಿಶೀಲಿಸಿ ಇದನ್ನು ಸಿದ್ಧಪಡಿಸಲು ಪ್ರಯತ್ನಿಸಿದ್ದರಿಂದ, ಹಲವೆಡೆ ಒಂದೇ ವಿಚಾರ ಪುನರಾವರ್ತನೆಯಾಗಿದೆ. ಬೇರೆ ಬೇರೆಯ ಉದಾಹರಣೆಗಳಿಂದ ಒಂದೇ ವಿಷಯವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದಂತೆ ಕಾಣುತ್ತದೆ.

ಬೇರೆ ಬೇರೆ ನುಡಿಗಳ ಲೇಖಕರು ಒಂದೇ ವಿಷಯದ ಬಗೆಗೆ ಬರೆದ ಕಾರಣ ಈ ಸಮಸ್ಯೆ ಉಂಟಾಗಿದೆ. ಆದರೂ ಇದರಲ್ಲಿ ತೀರ ವೈರುಧ್ಯಗಳಿಂದ ಕೂಡಿದ ಬರಹಗಳೇನೂ ಇಲ್ಲ. ಅಣ್ಣಮಲೈ, ಕೆ.ವಿ. ನಾರಾಯಣ, ಮೇಟಿ ಮಲ್ಲಿಕಾರ್ಜುನ ಅವರು ತಾತ್ವಿಕವಾದ ಪ್ರಶ್ನೆಗಳನ್ನು ವಿಶ್ಲೇಷಿಸಿದರೆ; ತೆಲುಗು, ತುಳು ಮಲಯಾಳಂ, ತಮಿಳು ನುಡಿಗಳ ಕುರಿತಾದ ಲೇಖನಗಳು ಸಮೀಕ್ಷರೂಪದ ಬರೆಹಗಳು.

ಈ ಬರಹಗಳು ಚಾರಿತ್ರಿಕ ನಿರೂಪಣೆ ಮತ್ತು ಭಾಷೆಯ ಸಮಸ್ಯೆಗಳನ್ನು ವಿವರಿಸಲು ಆರಿಸಿಕೊಂಡಿರುವ ತಾತ್ವಿಕತೆಯು ಒಂದೇ ಆಗಿರುವುದರಿಂದ ಇಂತಹ ಪುನರಾವರ್ತನೆಯ ಸಮಸ್ಯೆ ಎದುರಾಗಿದೆ. ಈ ಸಂಪುಟದಲ್ಲಿ ಇದನ್ನು ಸುಲಭವಾಗಿ ನಿವಾರಿಸಲು ಸಾಧ್ಯವಾಗದ ಸಮಸ್ಯೆಯು ಆಗಿರುವುದರಿಂದ, ಇದನ್ನು ತಾಳಿಕೊಂಡೇ ಓದಬೇಕಾಗುತ್ತದೆ.

ಕನ್ನಡದ ಸಂದರ್ಭದಲ್ಲಿ ಒಂದು ಮಾತು ಮತ್ತೆ ಮತ್ತೆ ಕೇಳಿಬರುತ್ತದೆ. ಹೊಸ ವಿಚಾರಗಳು ಸಮಾಜದಲ್ಲಿ ಮೂಡಿಬಂದರೂ ಅವು ಶೈಕ್ಷಣಿಕ ವ್ಯವಸ್ಥೆಯ ಭಾಗವಾಗಿ, ಜನರ ವಿವೇಕವಾಗಿ, ಕ್ರಿಯಾಯೋಜನೆಗಳಾಗಿ ಸಮಾಜ ಬದಲಾವಣೆಗೆ ನೆರವಾಗದೆ ಗ್ರಂಥಾಲಯದಲ್ಲಿ ಪೂಜೆಗೊಳ್ಳುತ್ತವೆ ಎನ್ನುವ ಮಾತದು. ಹಾಗೆ ಪೂಜೆಗೊಳ್ಳುವುದರಿಂದ ಯಾವ ವಿಚಾರಗಳಿಗೂ ಬೆಲೆಯಿಲ್ಲ ಎಂಬ ಭಾವನೆಯಿದೆ.

ಇಂತಹ ಅಪಾಯಕ್ಕೆ ಇಲ್ಲಿನ ವಿಚಾರಗಳು ಬಲಿಯಾಗಬಾರದು. ಇಲನ್ಲಿ ವಿಚಾರಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಿಯಾಯೋಜನೆಗಳಾಗಿ ರೂಪುಗೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ಇಂತಹ ಕೃತಿಗಳನ್ನು ರೂಪಿಸಿದವರ ಶ್ರಮ ಸಾರ್ಥಕವಾಗುವುದು.

ಈ ಬರಹದ ಆರಂಭದಲ್ಲಿ ಉದಾಹರಿಸಿದ ಹಾಡಿನ ಮುಂದಿನ ವಾಕ್ಯವು ‘ಜಂಟಿಯಾಗಿ ಹೋರಾಡುವ ಬಾರೆ ನನ್ನ ಚಿಕ್ಕ ತಂಗ್ಯಮ್ಮ’ ಎಂದು ಕೊನೆಗೊಳ್ಳುತ್ತದೆ. ಅದರ ಆಶಯದಂತೆಯೇ ಇಂದು ಎಲ್ಲ ತೆಂಕಣದ ಸೋದರ ಸೋದರಿ ನುಡಿಗಳು ಮತ್ತು ಭಾರತದ ಎಲ್ಲ ಜನನುಡಿಗಳು ಒಗ್ಗೂಡಿ ಹೋರಾಡಬೇಕಿದೆ. ಅಂತಹ ನುಡಿಹೋರಾಟಕ್ಕೆ ಇಂತಹ ಸಾವಿರಾರು ಹೊತ್ತಗೆಗಳು ರೂಪುಗೊಂಡು ನೆರವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT