ಅಬ್ಬಾ...! ನಂಬಲು ಅಸಾಧ್ಯ. ಕಡುವೈರಿಯ ಮಕ್ಕಳಾದರೂ, ಮನಸ್ಸು ಈ ಪರಿ ಕಲ್ಲಾಗದು. ಪೆಶಾವರದಲ್ಲಿ ತಾಲಿಬಾನ್ ಉಗ್ರರಿಂದ ನಡೆದ ಮಕ್ಕಳ ಹತ್ಯಾಕಾಂಡಕ್ಕೆ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ. ಉಗ್ರರ ಅಟ್ಟಹಾಸ ನಿರಂತರವಾಗಿ ನಡೆಯುತ್ತಿರುವುದರಿಂದ ಒಂದು ರೀತಿಯ ಭಯದ ವಾತಾವರಣದಲ್ಲಿ ಸಿಕ್ಕಿಹಾಕಿಕೊಂಡಂತಿದೆ.
ಈ ಹತ್ಯಾಕಾಂಡ ಇವತ್ತು ಪಾಕಿಸ್ತಾನದಲ್ಲಾಗಿರಬಹುದು, ನಾಳೆ ನಮ್ಮ ದೇಶದಲ್ಲಿ ಕೂಡ ಆಗಬಹುದು. ದೇಶದ ರಕ್ಷಣಾ ವ್ಯವಸ್ಥೆ, ಪೋಲಿಸ್ ವ್ಯವಸ್ಥೆ ಎಚ್ಚೆತ್ತುಕೊಂಡು, ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳ ಬಗ್ಗೆ ವಿಶೇಷ ಸುರಕ್ಷತಾ ಕ್ರಮಗಳನ್ನು ಅಳವಡಿಸಲೇಬೇಕು. ನೆರೆಹೊರೆ ರಾಷ್ಟ್ರಗಳಲ್ಲಿ ಆಗುತ್ತಿರುವ ದುಷ್ಕೃತ್ಯಗಳಿಂದ ನಾವು ಪಾಠ ಕಲಿಯದೇ ಹೋದರೆ, ಮುಂದೆ ನಾವು ಕೂಡ ಇಂತಹದ್ದೊಂದು ಹತ್ಯಾಕಾಂಡಕ್ಕೆ ಗುರಿಯಾಗಬೇಕಾದೀತು.
ಮಕ್ಕಳಿಗೆ ನೀಡುವ ಶಿಕ್ಷಣದ ಗುಣಮಟ್ಟಕ್ಕಿಂತ ಅವರ ಸುರಕ್ಷತೆ ಬಗೆಗೆ ಹೆಚ್ಚು ಕಾಳಜಿ ವಹಿಸಬೇಕಾದ ಅನಿವಾರ್ಯ ಈಗ ಒದಗಿದೆ. ಪೋಷಕರು ಈ ಕುರಿತು ನಿಗಾ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಶಾಲಾ ಆಡಳಿತ ಮಂಡಳಿಗಳ ಜತೆ ಸಮಾಲೋಚಿಸಬೇಕಿದೆ. ಪೆಶಾವರದಲ್ಲಿ ಆದಂತಹ ಕ್ರೌರ್ಯ, ಅಟ್ಟಹಾಸ, ಮುಂದೆ ಯಾವ ನೆಲದಲ್ಲೂ ಆಗದಿರಲಿ. ನಮ್ಮ ಮಕ್ಕಳ ರಕ್ಷಣೆಯನ್ನು ನಾವು ಮಾಡಿಕೊಳ್ಳಲೇಬೇಕು. ಮಕ್ಕಳು ನಮ್ಮ ಬದುಕಿನ ಕನಸುಗಳು...